ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಸಂಕಷ್ಟ

ಚಾಮರಾಜನಗರ: ಚಾಮರಾಜನಗರ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಸುನೀಲ್‌ ಬೋಸ್ ನಾಮಪತ್ರವನ್ನು ತಿರಸ್ಕರಿಸುವಂತೆ ದೂರು ದಾಖಲಾಗಿದೆ.

ನಾಮಪತ್ರ ಸಲ್ಲಿಕೆ ವೇಳೆ ಪ್ರಮಾಣ ಪತ್ರದಲ್ಲಿ ಪ್ರಮುಖ ಮಾಹಿತಿ ಮರೆಮಾಚಿದ್ದು, ಅವರ ನಾಮಪತ್ರ ತಿರಸ್ಕರಿಸುವಂತೆ ಆಗ್ರಹಿಸಿ ಜಿಲ್ಲಾ ಚುನಾವಣಾಧಿಕಾರಿಗೆ ಬಿಜೆಪಿ ದೂರು ನೀಡಿದೆ.

ಸುನೀಲ್ ಬೋಸ್ ತಮ್ಮ ವೈವಾಹಿಕ ಜೀವನದ ಬಗ್ಗೆ ಮರೆಮಾಚಿದ್ದಾರೆ. ಪ್ರಮಾಣ ಪತ್ರದಲ್ಲಿ ಹೆಂಡತಿ, ಮಕ್ಕಳು ಹಾಗೂ ಹಿಂದೂ ಅವಿಭಕ್ತ ಕುಟುಂಬದ ಪ್ರಮುಖ ಮಾಹಿತಿ ಮುಚ್ಚಿಟ್ಟಿದ್ದಾರೆ.

ಹೆಂಡತಿ, ಮಕ್ಕಳು ಹಾಗೂ ತಂದೆ-ತಾಯಿಯ ಆಸ್ತಿ ವಿವರ ಘೋಷಿಸಿಲ್ಲ ಹಾಗಾಗಿ ಸುನೀಲ್ ಬೋಸ್ ಸಲ್ಲಿಸಿರುವ ಪ್ರಮಾಣ ಪತ್ರ ಅಸಿಂಧುವಾಗಿದ್ದು, ಅವರ ನಾಮಪತ್ರ ಅಸಿಂಧುಗೊಳಿಸುವಂತೆ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜು ಅವರ ಪ್ರತಿನಿಧಿಯಾಗಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ನಾರಾಯಣ ಪ್ರಸಾದ್ ದೂರು ಸಲ್ಲಿಸಿದ್ದಾರೆ.