ಮೈಸೂರಿನಲ್ಲಿ ಮಕ್ಕಳ ಮಾರಾಟ ದಂಧೆ-ಪತ್ರಕರ್ತ ಸೇರಿ ಐವರ ಬಂಧನ

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಪುಟ್ಟ ಕಂದನ ಅಪಹರಿಸಿ ಮಾರಾಟ ಮಾಡಲು ಯತ್ನಿಸಿದವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

1ತಿಂಗಳ ಹಸುಗೂಸನ್ನು ಅಪಹರಿಸಿ ಮಾರಾಟಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಭಂಧಿಸಿದಂತೆ ವಿಜಯನಗರ ಠಾಣೆ ಪೊಲೀಸರು ಪತ್ರಕರ್ತ ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ.

ಅಪಹರಣಕ್ಕೆ ಒಳಗಾದ ಮಗುವನ್ನ ರಕ್ಷಿಸಿದ ಪೊಲೀಸರು ಪೋಷಕರ ಮಡಿಲಿಗೆ ಸೇರಿಸಿದ್ದಾರೆ.

ಮೈಸೂರಿನ ಪತ್ರಕರ್ತ ಮಂಜುನಾಥ್,ನಾಗವಾಲದ ಇಂದ್ರಕುಮಾರ್,ವಿಜಯಲಕ್ಷ್ಮಿ,ಸುಪ್ರಿಯ ಹಾಗೂ ಮಂಡ್ಯದ ಕುಮಾರ್ ಬಂಧಿತ ಆರೋಪಿಗಳು.

ಏಳು ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿದ್ದು ಉಳಿದಿಬ್ಬರು ತಲೆಮರೆಸಿಕೊಂಡಿದ್ದಾರೆ,ಇವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಮೈಸೂರಿನ ಹೊರವಲಯದ ಹಿನಕಲ್ ನ ಜೋಪಡಿಯಲ್ಲಿ ಬಿಹಾರ ಮೂಲದ ರಮಡಳ್ಳಿದೇವಿ ಹಾಗೂ ಜಿ.ಮಂಡಲ ದಂಪತಿ ತಮ್ಮ ಒಂದು ತಿಂಗಳ ಗಂಡು ಮಗು ಜೊತೆ ವಾಸವಿದ್ದರು.

ಆರೋಪಿಗಳು ಸಂಚು ಹೂಡಿ ಆಟವಾಡುತ್ತಿದ್ದ ಮಗುವನ್ನ ಅಪಹರಿಸಿ ಪರಿಚಯವಿರುವ ಒಬ್ಬರಿಗೆ ಮಾರಾಟ ಮಾಡಲು ವ್ಯವಹಾರ ಕುದುರಿಸಿದ್ದರು.

ಮಗು ಕಾಣೆಯಾದ ನಂತರ ಪೋಷಕರು ವಿಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಕೆಲವೇ ಗಂಟೆಗಳಲ್ಲಿ ಮಗುವನ್ನ ರಕ್ಷಿಸಿ ಪೋಷಕರ ಮಡಿಲು ಸೇರಿಸಿದ್ದಾರೆ.

ವಿಜಯನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಕಾನೂನು ಮತ್ತು ಸವ್ಯವಸ್ಥೆ ಡಿಸಿಪಿ ಮುತ್ತುರಾಜ್ ಹಾಗೂ ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಶ್ಲಾಘಿಸಿದ್ದಾರೆ.