ನನ್ನ ಹೆಸರು ಹೇಳದೇ ಇದ್ದರೆ ಕುಮಾರಸ್ವಾಮಿಗೆ ನಿದ್ರೆ ಬರಲ್ಲ: ಡಿಕೆಶಿ

ಚಿಕ್ಕಮಗಳೂರು: ನನ್ನ ಹೆಸರು ಹೇಳದೇ ಇದ್ದರೆ ಕುಮಾರಸ್ವಾಮಿಗೆ ನಿದ್ರೆ ಬರೋದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.

ಚುನಾವಣೆ ಮುಗಿದ ಬಳಿಕ ಚಿಕ್ಕಮಗಳೂರು ಹೊರವಲಯದಲ್ಲಿರುವ ಸೆರಾಯ್‌ ರೆಸಾರ್ಟ್‌ಗೆ ಡಿ.ಕೆ ಶಿವಕುಮಾರ್‌ ತಮ್ಮ ಕುಟುಂಬ ಸದಸ್ಯರ ಜೊತೆ ಆಗಮಿಸಿದ್ದು,ಈ ವೇಳೆ‌ ಮಾಧ್ಯಮದವರೊಂದಿಗೆ ಮಾತನಾಡಿದರು.

ಕುಮಾರಸ್ವಾಮಿ ಅವರಿಗೆ ದಿನಾ ನನ್ನ‌ ಹೆಸರು ಹೇಳದೆ ಇದ್ದರೆ ಆಗುವುದಿಲ್ಲ ಅದಕ್ಕೆ ನೆನಪಿಸಿಕೊಳ್ಳುತ್ತಾರೆ ‌ಎಂದು ಟಾಂಗ್ ನೀಡಿದರು.

ರಾಜ್ಯವ್ಯಾಪಿ ಪೆನ್‌ಡ್ರೈವ್‌ ಹಂಚಿದ್ದು ಡಿ.ಕೆ ಶಿವಕುಮಾರ್‌ ಮತ್ತು ತಂಡ ಎಂಬ ಆರೋಪ ಇದೆಯಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮೇಲೆ ಆರೋಪ ಮಾಡದಿದ್ದರೆ ಮಾರ್ಕೆಟ್‌ನಲ್ಲಿ ಸುದ್ದಿ ಓಡಲ್ಲ, ನನ್ನ ಹೆಸರು ಇರದಿದ್ದರೆ ನೀವು ಸುದ್ದಿ ತೋರಿಸಲ್ಲ, ಕಥಾನಾಯಕ, ನಿರ್ಮಾಪಕ, ನಿರ್ದೇಶಕ ಎಲ್ಲಾ ಅವರೇನೆ ಎಂದು ಕಿಡಿಕಾರಿದರು.

ಪೆನ್ ಡ್ರೈವ್ ವಿಚಾರ ಎಲ್ಲವೂ ಕುಮಾರಸ್ವಾಮಿಗೆ ಗೊತ್ತಿದೆ, ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ ಒಕ್ಕಲಿಗ ನಾಯಕರ ಪೈಪೋಟಿಯಂತೆ, ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಹೆದರಿಸುವುದೇ ಇವರ ಕೆಲಸ ಎಂದು ಆರೋಪಿಸಿದರು.

ಕುಮಾರಸ್ವಾಮಿ ಕಿಂಗ್‌ ಆಫ್‌ ಬ್ಲಾಕ್‌ಮೇಲ್‌, ಚರ್ಚೆ ಮಾಡಲು ಸದನ ಇದೆ, ಎಲ್ಲವನ್ನೂ ತಗೆದುಕೊಂಡು ಬರಲಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.

ಅವರದ್ದೇ ಬೇರೆ ಫ್ಯಾಮಿಲಿ ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ದಾರೆ, ಉಪ್ಪು ತಿಂದವನು ನೀರು ಕುಡಿಬೇಕು ಎಂದವರು ಈಗ ಯಾಕೆ ಏನೇನೊ ಹೇಳೋದು, ಇವರೇನು ಲಾಯರ್ರಾ ಅಥವಾ ಜಡ್ಜಾ, ಹೋಗಿ ವಾದ ಮಾಡಲಿ ಎಂದು ವಾಗ್ದಾಳಿ ನಡೆಸಿದರು.