ರೈತರಿಗಾಗಿ ಹಣ ಕೇಳಿದ್ದೇವೆ,ಗ್ಯಾರಂಟಿಗಳಿಗೆ ಅಲ್ಲಾ-ಸಿದ್ದರಾಮಯ್ಯ ತಿರುಗೇಟು

ಬೆಂಗಳೂರು: ನಾವು ರೈತರಿಗಾಗಿ ಹಣ ಕೇಳಿದ್ದೆವೇ ವಿನಹ ಗ್ಯಾರಂಟಿಗಾಗಿ ಹಣ ಕೇಳಿಲ್ಲ, ಕೇಳುವುದೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕೇಂದ್ರ ಸರ್ಕಾರ 3,454 ಕೋಟಿ ರೂ. ಬರ ಪರಿಹಾರವನ್ನು ಬಿಡುಗಡೆ ಮಾಡಿದ್ದನ್ನು ಖಂಡಿಸಿ ಚೊಂಬು ಹಿಡಿದು ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಕಾಂಗ್ರೆಸ್‌ ಪ್ರತಿಭಟನೆ ನಡೆಸಿದ ವೇಳೆ ಸಿಎಂ ಮಾತನಾಡಿದರು.

ಈ ವೇಳೆ ಗ್ಯಾರಂಟಿ ಈಡೇರಿಕೆಗೆ ಹಣ ಸಾಕಾಗುತ್ತಿಲ್ಲ, ಹೀಗಾಗಿ ಕೇಂದ್ರದ ಹಣ ಪಡೆಯಲು ಸರ್ಕಾರ ಮುಂದಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, ಬರ ಪರಿಹಾರಕ್ಕೆ 18,771 ಕೋಟಿ ರೂ. ಹಣ ಕೇಳಿದ್ದೇವೆ. ನಾವು 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ಅಶೋಕ್, ಬೊಮ್ಮಾಯಿ,ಯಡಿಯೂರಪ್ಪ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅಂದ್ರೆ ಸುಳ್ಳಿನ ಫ್ಯಾಕ್ಟರಿ ಈಗ ಜೆಡಿಎಸ್ ನ ಕೂಡಾ ಸೇರಿಸಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಕಿಡಿಕಾರಿದರು.

ನರೇಗಾ ಮಾನವ ದಿನ ಹೆಚ್ಚಳವಾಗಿಲ್ಲ, ರಾಜ್ಯದ ಜನರಿಗೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ. ಎಲ್ಲಾ ವಿಷಯಗಳಲ್ಲಿ ಅನ್ಯಾಯವಾಗಿದೆ ಎಂದು ಹೇಳಿ ಸಿದ್ದರಾಮಯ್ಯ ಚೊಂಬು ಎತ್ತಿ ಹಿಡಿದು ತೋರಿಸಿದರು.

ಗಾಂಧಿ ಪ್ರತಿಮೆಯಿಂದ ದೇವರಾಜ ಅರಸು ಪ್ರತಿಮೆ ವರೆಗೆ ಕಾಂಗ್ರೆಸ್‌ ನಾಯಕರು ಚೊಂಬನ್ನು ತಲೆ ಮೇಲೆ ಇಟ್ಟುಕೊಂಡು ಪಾದಯಾತ್ರೆ ನಡೆಸಿ ಪ್ರತಿಭಟನೆ ಕೊನೆಗೊಳಿಸಿದರು.