ಎಸ್.ಕೆ.ಭಗವಾನ್ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರಾದ ಎಸ್.ಕೆ.ಭಗವಾನ್ ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

ಅವರಿಗೆ 90 ವರ್ಷಗಳಾಗಿತ್ತು.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಳಗ್ಗೆ 6 ಗಂಟೆಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮೂವರು ಗಂಡು ಮಕ್ಕಳು, ಒಬ್ಬ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು‌ ಅವರು ಅಗಲಿದ್ದಾರೆ.

ಕಳೆದ 2009ರಲ್ಲಿ ಅವರ ಪತ್ನಿ ನಿಧನರಾಗಿದ್ದರು. ಲವಲವಿಕೆಯಿಂದಲೇ ಇದ್ದ ಭಗವಾನ್ ಅವರಿಗೆ ಕಳೆದ ಶುಕ್ರವಾರ ಹೃದಯಘಾತವಾಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಅವರ ಆಸೆಯಂತೆ ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಗಿದೆ ಎಂದು ಅವರ ಪುತ್ರ ಜ್ಯೋತಿಂದರ್ ತಿಳಿಸಿದ್ದಾರೆ.

ಸಹಕಾರನಗರದ ಭಗವಾನ್ ಅವರ ನಿವಾಸದಲ್ಲಿ 12 ಗಂಟೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ನಂತರ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ತಂದು ಸಂಜೆ 5 ಗಂಟೆವರೆಗೂ ಅಭಿಮಾನಿಗಳಿಗೆ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು.

ಭಗವಾನ್ ನಿರ್ದೇಶನದಿಂದ ಮೂಡಿಬಂದ ಹಲವಾರು ಚಿತ್ರಗಳು ಕನ್ನಡಿಗರ ಮನೆ ಮನೆಯ ಕಥೆಗಳಂತಿದ್ದವು.

ಅಶ್ಲೀಲತೆಯ ಸೋಂಕು ಇಲ್ಲದ ಪರಿಶುದ್ಧ ಮನರಂಜನೆಯ ಚಿತ್ರಗಳನ್ನು ನೀಡಿದ ನಿರ್ದೇಶಕರಲ್ಲಿ ಅಗ್ರಪಂಕ್ತಿಯಲ್ಲಿ ಭಗವಾನ್ ನಿಲ್ಲುತ್ತಾರೆ.

ಕನ್ನಡದ ಕಾದಂಬರಿಗಳನ್ನು ಜನಪ್ರಿಯಗೊಳಿಸಿದ ಕೀರ್ತಿ ಭಗವಾನ್ ಅವರಿಗೆ ಸಲ್ಲುತ್ತದೆ.

ದೊರೆ-ಭಗವಾನ್ ಎಂದೇ ಪ್ರಸಿದ್ದಿ ಪಡೆದಿದ್ದ ಈ ಜೋಡಿ ಕನ್ನಡ ಚಿತ್ರರಂಗದಲ್ಲಿ ಹಲವಕಾರು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು.

ಅದರಲ್ಲೂ ವಿಶೇಷವಾಗಿ ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರ ಬಹಳಷ್ಟು ಚಿತ್ರಗಳನ್ನು  ನಿರ್ದೇಶಿಸಿದ್ದರು. ಅದರಲ್ಲೂ ಕಸ್ತೂರಿ ನಿವಾಸ ಇಂದಿಗೂ ಕೂಡ ಎವರ್‍ಗ್ರೀನ್ ಹಿಟ್ ಚಿತ್ರವಾಗಿದೆ.

ಎಸ್.ಕೆ.ಭಗವಾನ್ 1933ರ ಜುಲೈ 5ರಂದು ಮೈಸೂರಿನಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ಪ್ರೌಢಶಾಲೆ ಹಾಗೂ ಕಾಲೇಜು ವ್ಯಾಸಂಗ ಬೆಂಗಳೂರಿನಲ್ಲಿ ನಡೆಸಿದ್ದರು.

ಶಾಲಾ-ಕಾಲೇಜಿನಲ್ಲಿಯೇ ನಾಟಕದ ಬಗ್ಗೆ ಆಸಕ್ತರಾಗಿ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು. ಬೇರೆ ಬೇರೆ ನಾಟಕ ತಂಡಗಳು ನೀಡುತ್ತಿದ್ದ ನಾಟಕಗಳಿಂದ ಭಗವಾನ್ ಆಕರ್ಷಿತರಾಗಿದ್ದರು.

ಗೋವಾದಲ್ಲಿ ಸಿಐಡಿ 999 (1968), ಆಪರೇಷನ್ ಜÁಕ್‍ಪಾಟ್‍ನಲ್ಲಿ ಸಿಐಡಿ 999 (1969) ಚಿತ್ರಗಳನ್ನು ಈ ಜೋಡಿ ನಿರ್ದೇಶಿಸಿದರು. ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಗಾಳಿಮಾತು, ಚಂದನದ ಗೊಂಬೆ, ಹೊಸಬೆಳಕು, ಬೆಂಕಿಯ ಬಲೆ, ಸಮಯದ ಗೊಂಬೆ, ಯಾರಿವನು, ಗಗನ, ನೀನು ನಕ್ಕರೆ ಹಾಲು ಸಕ್ಕರೆ, ಜೀವನ ಚೈತ್ರ ಮುಂತಾದವು ಭಗವಾನ್ ಅವರು ದೊರೈ ಅವರೊಂದಿಗೆ ನಿರ್ದೇಶಿಸಿದ ಪ್ರಮುಖ ಚಿತ್ರಗಳು. ಮಾಂಗಲ್ಯ ಬಂಧನ (1993) ಭಗವಾನ್ ಒಬ್ಬರೇ ನಿರ್ದೇಶಿಸಿರುವ ಚಿತ್ರ.

ಇವರು ನಿರ್ದೇಶಿಸಿದ ಮುನಿಯನ ಮಾದರಿ (1981-82) ಹಾಗೂ ಜೀವನ ಚೈತ್ರ (1992-93) ಚಿತ್ರಗಳು ರಾಜ್ಯ ಸರ್ಕಾರದಿಂದ ಪ್ರಶಸ್ತಿಗೆ ಪುರಸ್ಕೃತವಾಗಿವೆ.

1995-96ನೆ ಸಾಲಿನಲ್ಲಿ ಪ್ರತಿಷ್ಠಿತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ದೊರೈರಾಜ್ ಅವರೊಂದಿಗೆ ಹಂಚಿಕೊಂಡಿದ್ದಾರೆ. 2010ರಲ್ಲಿ ರಾಜಕುಮಾರ್ ಸೌಹಾರ್ದ ಪ್ರಶಸ್ತಿಗೆ ಭಾಜನರಾಗಿದ್ದಾರೆ.