ಮೈಸೂರು,ಮೇ.27- ಪೂಜ್ಯ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಜಗತ್ತಿನೆಲ್ಲೆಡೆ ಭಾರತೀಯ ಸಂಸ್ಕೃತಿ ಗಟ್ಟಿಯಾಗಿ ನೆಲೆಗೊಳ್ಳುವಂತೆ ಮಾಡಿದ್ದಾರೆ ಎಂದು ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ನುಡಿದರು.
ನಾದಮಂಟಪದಲ್ಲಿ ಇಂದು ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಗಣಪತಿ ಶ್ರೀಗಳಿಗೆ 80ನೆ ಜನ್ಮದಿನದ ಶುಭಕಾಮನೆ ಸಲ್ಲಿಸಿ ಅವರು ಮಾತನಾಡಿದರು.
ಶ್ರೀಗಳು ಇಂದಿನ ದಿನಮಾನದ ಶ್ರೇಷ್ಠ ಪರಂಪರೆಯಾದ ಆಧ್ಯಾತ್ಮಿಕ ರಾಯಭಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಬಣ್ಣಿಸಿದರು.
ಶ್ರೀಗಳು ವಿಶ್ವದೆಲ್ಲೆಡೆ ಆಧ್ಯಾತ್ಮಿಕ ಎಂಬ ಅಮೃತವನ್ನು ಸಿಂಚನ ಮಾಡುತ್ತಿದ್ದಾರೆ ಎಂದು ನುಡಿದರು.
ವೇದ,ಕಲೆ,ಸಂಸ್ಕೃತಿ, ಸಂಗೀತ, ಆಧ್ಯಾತ್ಮ ಒಟ್ಟೊಟ್ಟಿಗೆ ಮೇಳೈಸಿದ ಪುಣ್ಯ ಕ್ಷೇತ್ರ ಗಣಪತಿ ಸಚ್ಚಿದಾನಂದ ಆಶ್ರಮ ಎಂದು ಸುತ್ತೂರು ಶ್ರೀ ಗಳು ವರ್ಣಿಸಿದರು.
ಜಗತ್ತನ ತುಂಬಾ ಆಶ್ರಮಗಳನ್ನು ಶ್ರೀಗಳು ಸ್ಥಾಪಿಸಿದ್ದಾರೆ,ಈ ಮೂಲಕ ಆಧ್ಯಾತ್ಮಿಕ ನಮ್ಮ ಸಂಸ್ಕೃತಿಯನ್ನು ಪಸರಿಸಿದ್ದಾರೆ, ಶ್ರೀಗಳು ಭಕ್ತರಲ್ಲಿ ಅಂತಃಶಕ್ತಿ ಸದಾ ಜಾಗೃತವಾಗಿರುವಂತೆ ಮಾಡಿದ್ದಾರೆ. ವರ್ಷದ 365 ದಿನಗಳ ಕಾಲವೂ ಸೂರ್ಯ-ಚಂದ್ರನ ಬೆಳಕು ಈ ಆಶ್ರಮದ ಮೇಲೆ ಬೀಳುತ್ತಿರುತ್ತದೆ ಎಂದು ತಿಳಿಸಿದರು.
ಬಾಲಸ್ವಾಮಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಹಿರಿಯ ಶ್ರೀಗಳಹಾದಯಲ್ಲಿ ಸಾಗುತ್ತಿದ್ದಾರೆ. ಗಣಪತಿ ಶ್ರೀಗಳ ಜನ್ಮದಿನದ ಪ್ರಯುಕ್ತ ವಿಶ್ವಶಾಂತಿಗಾಗಿ ಪ್ರಾರ್ಥಿಸಿ ಮೇಕೆದಾಟಿನಿಂದ ಪಾದಯಾತ್ರೆ ಮಾಡುವ ಮೂಲಕ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಸುತ್ತೂರು ಶ್ರೀಗಳು ನುಡಿದರು.
ರಾಮಕೃಷ್ಣ ಮಠದ ಶ್ರೀ ಮುಕ್ತಿದಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ಭಾರತ ದೇಶ ಸಂತರ ನಾಡು. ಯತಿವರೇಣ್ಯರಾದ ಗಣಪತಿ ಶ್ರೀಗಳು ಆಧ್ಯಾತ್ಮಿಕತೆಯನ್ನು ಎಲ್ಲೆಡೆ ಪಸರಿಸುತ್ತಾ ಸನಾತನ ಧರ್ಮದ ಶ್ರೇಯಸ್ಸಿಗೆ ಶ್ರಮಿಸುತ್ತಿದ್ದಾರೆ ಎಂದು ನುಡಿದರು.
ಹರಿಹರ ಪಂಚಮಸಾಲಿ ಮಠದ ಶ್ವಾಸಗುರು ಖ್ಯಾತಿಯ ಶ್ರೀ ವಚನಾನಂದ ಸ್ವಾಮೀಜಿಯವರು ಈ ವೇಳೆ ಸಭಿಕರಿಗೆ ದ್ಯಾನವನ್ನು ಮಾಡಿಸಿದುದು ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ಅವರು ಗಣಪತಿ ಶ್ರೀಗಳು ಶ್ರೀ ದತ್ತನ ಸ್ವರೂಪ ಎಂದು ಬಣ್ಣಿಸಿದರು.
ಶ್ರೀಗಳು ಟ್ರಿನಿಡಿ ದೇಶಕ್ಕೆ ಭೇಟಿ ನೀಡಿದಾಗ ಅಲ್ಲಿಯೂ ಹಿಮಾಲಯದಿಂದ ಗಂಗೆ ಹರಿಯುತ್ತಿದ್ದಾಳೆ ಎಂಬುದನ್ನು ತೋರಿಸಿಕೊಟ್ಟ ಮಹಾತ್ಮರು ಎಂದು ಶ್ವಾಸಗುರು ನುಡಿದರು.
ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮೂವರು ಶ್ರೀಗಳಿಗೆ ವಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಗಣಪತಿ ಸ್ವಾಮೀಜಿಯವರು ಭಾಗವತದ ಆಡಿಯೋ ಆಲ್ಬಂ, ಬೋನ್ಸಾಯ್ ಆಲ್ಬಂ ಬಿಡುಗಡೆ ಮಾಡಿದರು

