ಮೈಸೂರು: ಮರ್ಯಾದಾ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಮೃತ ಶಾಲಿನಿ ಸಾವಿಗೂ ಮುನ್ನ ಮಾತನಾಡಿರುವ ಆಡಿಯೋ ಈಗ ಬಹಿರಂಗವಾಗಿದೆ.
ಬಹಿರಂಗವಾಗಿರುವ ಆಡಿಯೋದಲ್ಲಿ ಪ್ರಿಯಕರ ಮಂಜುನಾಥ್ ಜೊತೆ ಫೋನ್ ನಲ್ಲಿ ಮಾತನಾಡಿದ್ದ ಶಾಲಿನಿ ನಾನು ಸತ್ತರೆ ಅದಕ್ಕೆ ಅಪ್ಪ-ಅಮ್ಮನೇ ಕಾರಣ. ನನ್ನನ್ನು ಅಪರಿಸುವ ಪ್ಲ್ಯಾನ್ ಮಾಡಿದ್ದಾರೆಂದು ತಿಳಿಸಿದ್ದಾಳೆ.
ನನ್ನನ್ನು ಅಪ್ಪ-ಅಮ್ಮ ಬಾಲಮಂದಿರದಿಂದ ಮನೆಗೆ ಕರೆದುಕೊಂಡು ಬಂದಿದ್ದಾರೆ. ನಾನು ಹೇಳಿರುವುದನ್ನು ರೆಕಾರ್ಡ್ ಮಾಡುವಂತೆ ಯುವಕನಿಗೆ ಹೇಳಿದ್ದಾಳೆ ಎನ್ನಲಾಗಿದೆ.
ನಾನು ಸತ್ತರೆ ಅದನ್ನು ನಿನ್ನ ಮೇಲೆ ಹಾಕಲು ಪ್ಲ್ಯಾನ್ ಮಾಡುತ್ತಿದ್ದಾರೆ. ನನ್ನ ಈ ಆಡಿಯೋವನ್ನು ಪಿರಿಯಾಪಟ್ಟಣ ಪೊಲೀಸರಿಗೆ ಕೊಡು ಎಂದು ಶಾಲಿನಿ ಪ್ರಿಯಕರ ಮಂಜುನಾಥ್ ಗೆ ಹೇಳಿದ್ದಾಳೆ.
ಮಂಜುನಾಥ್ ನೀನು ಬಾಲಮಂದಿರದಿಂದ ಯಾಕೆ ಬಂದೆ ನಿನಗೆ ಏನೇ ಆದರೂ ನನಗೆ ಕಾಲ್ ಮಾಡು, 18ವರ್ಷ ತುಂಬುವವರೆಗೂ ಹುಷಾರಾಗಿರು ಎಂದು ಫೋನ್ ನಲ್ಲಿ ಹೇಳಿದ್ದ ಎಂದು ತಿಳಿದು ಬಂದಿದೆ.
ಪೊಲೀಸರಿಗೆ ಮಂಜುನಾಥ್ ಈ ಕುರಿತು ಮಾಹಿತಿ ನೀಡಿದ್ದು ನನ್ನನ್ನು ಕೊಲೆ ಮಾಡಿಸಲು ಶಾಲಿನಿ ತಂದೆ 2ಲಕ್ಷರೂ. ಸುಪಾರಿ ನೀಡಿದ್ದಾರೆ.
ಸಾವಿಗೂ ಮುನ್ನ ಶಾಲಿನಿ ಈ ಕುರಿತು ನನಗೆ ಮಾಹಿತಿ ನೀಡಿದ್ದಳು. ನನ್ನ ವಿರುದ್ಧ ಮೂರು ಬಾರಿ ಸುಳ್ಳು ದೂರು ದಾಖಲಿಸಿದ್ದಾರೆ. ಕಳೆದ 4ತಿಂಗಳಿನಿಂದ ನಾನು ಶಾಲಿನಿಯನ್ನು ಪ್ರೀತಿಸುತ್ತಿದ್ದೆ. 18ವರ್ಷವಾದ ಬಳಿಕ ಮದುವೆಯಾಗುವ ಭರವಸೆ ನೀಡಿದ್ದೆ.
ಅನ್ಯಜಾತಿ ಎಂಬ ಕಾರಣಕ್ಕೆ ಶಾಲಿನಿ ತಂದೆ ಮದುವೆಗೆ ಒಪ್ಪಿರಲಿಲ್ಲ. ನನಗೂ ಸಹ ಜೀವ ಬೆದರಿಕೆ ಇದೆ ಎಂದು ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಶಾಲಿನಿ ಪಿರಿಯಾಪಟ್ಟಣ ಪೊಲೀಸರಿಗೆ ಸುದೀರ್ಘ ಪತ್ರವೊಂದನ್ನು ಸಾವಿಗೂ ಮುನ್ನವೇ ಬರೆದಿದ್ದು ನನ್ನ ಸಾವಿಗೆ ಮಂಜುನಾಥ್ ಕಾರಣ ಅಲ್ಲ. ನನ್ನ ಅಪ್ಪ-ಅಮ್ಮ, ಚಿಕ್ಕಪ್ಪ-ಚಿಕ್ಕಮ್ಮ ಕಾರಣ.
ನನ್ನ ಸಾವಿಗೆ ಯಾರಿಗೂ ಶಿಕ್ಷೆ ಕೊಡಬೇಡಿ. ಅಪ್ಪ-ಅಮ್ಮನನ್ನು ಕರೆದು ಬುದ್ಧಿ ಹೇಳಿ ಎಂದು ಪತ್ರದಲ್ಲಿ ತಿಳಿಸಿದ್ದಾಳೆ ಎನ್ನಲಾಗಿದೆ.

