ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಮೈಸೂರು: ಬಿಜೆಪಿಯವರದ್ದು ಟೀಕೆ ಮಾಡುವುದೇ ಪ್ರವೃತ್ತಿ,ಅವರು ದೇಶಕ್ಕಾಗಿ ಯಾವುದೇ ಒಳ್ಳೆ ಕೆಲಸ ಮಾಡಿಲ್ಲ ಎಂದು ರಾಜ್ಯಸಭಾ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರ ಕೊಡುಗೆ ಶೂನ್ಯ ಎಂದು ಹೇಳಿದರು.

2014 ರವರೆಗೆ ಕಾಂಗ್ರೆಸ್ ಉತ್ತಮ ಕೆಲಸ ಮಾಡಿದೆ ಎಂದರು.

ಸೋನಿಯಾ ಗಾಂಧಿ ಅವರಿಗೆ ಇಡಿ ವಿಚಾರಣೆ ಕುರಿತು ಪ್ರತಿಕ್ರಿಯೆ ನೀಡಿ ಈ ದೇಶಕ್ಕಾಗಿ ಮನೆಯರನ್ನೇ ಕಳೆದುಕೊಂಡವರು ಒಂದು ಕೋಟಿ ರೂಪಾಯಿ ಅವ್ಯವಹಾರ ಮಾಡುತ್ತಾರೇನ್ರಿ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದರು.

ಗಾಂಧಿ ಕುಟುಂಬವನ್ನು ವಿಚಾರಣೆಗೆ ಕರೆದ ಕೂಡಲೇ ನಾವು ಮಾನಸಿಕವಾಗಿ ಕುಗ್ಗುವುದಿಲ್ಲ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ, ತ್ಯಾಗ, ಬಲಿದಾನ ಮಾಡಿರುವ ಪಕ್ಷ ಕಾಂಗ್ರೆಸ್ ಎಂದು ತಿಳಿಸಿದರು.

ಸತ್ಯಾಗ್ರಹವನ್ನೇ ಮಾಡದವರು, ತ್ಯಾಗ ಬಲಿದಾನ ಗೊತ್ತಿಲ್ಲದ ಬಿಜೆಪಿಯವರಿಂದ ನಮ್ಮನ್ನ ಹೆದರಿಸಲು ಸಾಧ್ಯವಿಲ್ಲ,

ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಗಿಮಿಕ್ ಗಳನ್ನ ಬಿಜೆಪಿ ಮಾಡುತ್ತಿದೆ ಎಂದು ಖರ್ಗೆ ಆರೋಪಿಸಿದರು.