ಬಿಜೆಪಿಯಂತಹ ಭ್ರಷ್ಟ ಸರ್ಕಾರ ಎಲ್ಲೂ ನೋಡಿಲ್ಲ; ಸಿದ್ದು ಗುಡುಗು

ಮೈಸೂರು: ಬಿಜೆಪಿಯದು ಅತ್ಯಂತ ಭ್ರಷ್ಟ ಸರ್ಕಾರ. ಇಂತಹ ಸರ್ಕಾರವನ್ನು ಎಲ್ಲಿಯೂ ನೋಡಿಲ್ಲ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಅಂಗೈ ಹುಣ್ಣಿಗೆ ಕನ್ನಡಿ ಬೇಕಾ, ಸರ್ಕಾರದ ಭ್ರಷ್ಟಾಚಾರ ಎಲ್ಲರಿಗೂ ಗೊತ್ತಿದೆ ಎಂದರು.

ಸಿದ್ದರಾಮಯ್ಯ ಯಾವತ್ತೂ ಹರಿಶ್ಚಂದ್ರ ಅಂತ ಹೇಳಿಕೊಂಡಿಲ್ಲ. ನಾನು ಹರಿಶ್ಚಂದ್ರನ ವಂಶ ಅಂತನೂ ಹೇಳಿಕೊಂಡಿಲ್ಲ ಎಂದರು.

ಎರಡೂ ಕಡೆ ಬಿಜೆಪಿ ಸರ್ಕಾರ ಇದೆ. ಸಿಬಿಐ ಗೆ ಕೊಡಲಿ ತನಿಖೆ ಮಾಡಿಸಲಿ  ವಾಸ್ತವಾಂಶವನ್ನು ಸಮಾಜಕ್ಕೆ ತೋರಿಸಲಿ ಎಂದು ಹೇಳಿದರು.

ನಮ್ಮ ಕಾಲದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆಯೂ ತನಿಖೆ ಮಾಡಿಸಿ. ಗಂಭೀರ ಆರೋಪ ಬಂದಾಗ ಯಾವುದೋ ಒಂದು ನೆಪಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನ ಮಾಡಬಾರದು ಎಂದು ತಿಳಿಸಿದರು.

ಪ್ರಣಾಳಿಕೆಯಲ್ಲಿ ಸಾಲ ಮನ್ನಾ ಮಾಡುತ್ತೇವೆ ಅಂದ್ರು ಮಾಡಿದ್ದಾರಾ, ರೈತರ ಬೆಳೆಗೆ ಸರಿಯಾದ ಬೆಲೆ ಕೊಟ್ಟರಾ ನಾಲ್ಕು ವರ್ಷಗಳು ಆಯ್ತಲ್ಲಾ ಏನ್ಮಾಡಿದ್ದೀರಿ ಎಂದು ಗುಡುಗಿದರು.

ಎಸಿಬಿ ಅಧಿಕಾರಕ್ಕೆ ಬಂದ 24 ಗಂಟೆಗೆ ಇಳಿಸುತ್ತೇವೆ ಅಂದಿದ್ದರು. ಅವರ ಅವಧಿ ಮುಗಿದರೂ ಅವರ ಪ್ರಣಾಳಿಕೆಯಲ್ಲಿನ ಶೇ.90 ರಷ್ಟು ಫುಲ್ ಫಿಲ್ ಆಗಿಲ್ಲ ಎಂದು ಕಿಡಿಕಾರಿದರು.

ಗುತ್ತಿಗೆದಾರರ ಸಂಘದವರು ಪ್ರಧಾನಿಗಳಿಗೆ ಪತ್ರ ಬರೆದಿದ್ದಾರೆ. ಇದರ ಬಗ್ಗೆ ತನಿಖೆ ಮಾಡಿಸಿ ಅಂಥ ಕೋರಿದ್ದಾರೆ. ಇದರ ಬಗ್ಗೆ ಏನೂ ಕ್ರಮ ಕೈಗೊಂಡಿಲ್ಲ.

ಕೆಂಪಣ್ಣ ನನಗೂ ಒಂದು ಕಾಪಿ ಕಳಿಸಿಕೊಟ್ಟಿದ್ದರು. ಏಪ್ರಿಲ್ ನಲ್ಲಿ ಮನವಿ ಮಾಡಿದ್ದರು. ಇಲ್ಲಿಯವರೆಗೂ ಏನೂ ಕ್ರಮ ವಹಿಸಿಲ್ಲ.

ಮೊನ್ನೆ ಕೆಂಪಣ್ಣ ಮತ್ತು ಕೆಲವರು ನನ್ನನ್ನು ಭೇಟಿ ಮಾಡಿ ಕಷ್ಟ ಹೇಳಿಕೊಂಡರು. 40% ಕಮಿಷನ್, ಬಿಬಿಎಂಪಿ 50% ಆಗಿದೆ. ಎಲ್ಲಾ ಮಂತ್ರಿಗಳು ಕೂಡ ಕಮಿಷನ್ ಹೊಡಿತಾರೆ ಎಂದಿದ್ದರು.

ಮುನಿರತ್ನ ಅವರ ಬಗ್ಗೆ ನೇರ ಆರೋಪ ಮಾಡಿದ್ದರು. ಆದರೆ ಸಿಎಂ ದಾಖಲಾತಿ ಕೇಳ್ತಾ ಇದ್ದಾರೆ,ದಾಖಲಾತಿ ಪಡೆದು ಕ್ರಮ ಕೈಗೊಳ್ಳಲಿ ಎಂದು ಸಿದ್ದು ಸಲಹೆ ನೀಡಿದರು.

ಗುತ್ತಿಗೆದಾರರ ಸಂಘದಿಂದ ಪ್ರಧಾನಿಗೆ ಪತ್ರ ಬರೆದಿರೋದು ಇದೇ ಮೊದಲು ಇತಿಹಾಸದಲ್ಲಿ.

ಕೆಂಪಣ್ಣ ಅವರು ಬಿಜೆಪಿಯವರು ತೊಂದರೆ ಕೊಡ್ತಾ ಇದ್ದಾರೆ ಅಂಥ ಹೇಳಿದ್ರು. ಅದಕ್ಕೆ ನಾನು ತನಿಖೆ ಮಾಡಿಸಿ ಎಂದು ಹೇಳಿದೆ.

ಸಾಮಾನ್ಯವಾಗಿ ಕಮಿಷನ್ ತೆಗೆದುಕೊಂಡರೆ ದಾಖಲಾತಿ ಎಲ್ಲಿ ಕೊಡೋದು ? ಮುಖ್ಯಮಂತ್ರಿ ಬೊಮ್ಮಾಯಿ ಹೇಳ್ತಾರೆ ಕೋರ್ಟಿಗೆ ದಾಖಲಾತಿ ಕೊಡಲಿ ಅಂತ.

ಪ್ರಾಮಾಣಿಕರು ಅಂತ ಹೇಳ್ತಾರೆ,ಲಂಚ ಅಂದ್ರೆ ಗೊತ್ತೇ ಇಲ್ಲ ಅಂತಾರೆ ಹಾಗಾದರೆ ತನಿಖೆಗೆ ಒಪ್ಪಿಗೆ ಕೊಡಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು ಹಾಕಿದರು.

ಸಬ್ ಇನ್ಸ್ಪೆಕ್ಟರ್ ನೇಮಕಾತಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಅಂಥ ಅರಗ ಜ್ಞಾನೇಂದ್ರ ಹೇಳಿದ್ದರು. ಅಮೃತ ಪೌಲ್ ಎಷ್ಟು ಲಂಚ ತಗೊಂಡಿದ್ದರು ಹೇಳಿ.

ಒಬ್ಬೊಬ್ಬರತ್ರ 30 ರಿಂದ ಒಂದು ಕೋಟಿ ಲಂಚ ಪಡೆದಿದ್ದಾರೆ. ಅಧಿಕಾರಿಗಳು ಮಾಡಿದ್ದರೆ ಅವರಿಗೆ ಶಿಕ್ಷೆ ಕೊಡಲಿ ಅಂತ ಮುಖ್ಯಮಂತ್ರಿ ಹೇಳ್ತಾರೆ. ಇದರಲ್ಲಿ ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನಿಗಮ ಮಂಡಳಿಗಳಿಗೆ ಸರಿಯಾದ ಅನುದಾನ ಕೊಡುತ್ತಿಲ್ಲ. ನಮ್ಮ ಕಾಲದಲ್ಲಿ ಈ ರೀತಿ ಇತ್ತಾ ಬಡವರ ಬಗ್ಗೆ ಪ್ರೀತಿ ಎಲ್ಲಿದೆ ಈ ಸರ್ಕಾರಕ್ಕೆ ಎಂದು ಟಾಂಗ್ ನೀಡಿದರು.

ಎಲ್ಲಿದೆ ಗವರ್ನಮೆಂಟ್ ? ಇದು ಸಂಪೂರ್ಣವಾಗಿ ಸತ್ತಿದೆ. ಅದಕ್ಕೆ ಮಾಧುಸ್ವಾಮಿ ಸತ್ಯಾನೇ ಹೇಳಿದ್ದಾರೆ. ಇದನ್ನೆಲ್ಲ ಹೇಳಿದ್ರೆ ಬೇರೆ ಏನನ್ನೋ ಸೃಷ್ಟಿ ಮಾಡಿ ನಮ್ಮ ಮೇಲೆ ಅಪಪ್ರಚಾರ ಮಾಡೋದು.

ಧರ್ಮ, ಜಾತಿ ಕೋಮು ಸಂಘರ್ಷ, ಮಾಂಸ ಅದು ಇದು ಅಂತ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಇದು ಇವರ ಸಾಧನೆ ಎಂದು ಸಿದ್ದು ಟೀಕಿಸಿದರು.

ಈಶ್ವರಪ್ಪನ ಬಗ್ಗೆ ಗುತ್ತಿಗೆದಾರ ಸಂಪತ್ತು ಆರೋಪ ಮಾಡಿ ಡೆತ್ ನೋಟ್ ಬರದಿಟ್ಟು ಸತ್ತೋದ ಪಾಪಾ,ಏನಾಯ್ತು ಅದು.

ಭ್ರಷ್ಟಾಚಾರದ ಸರ್ಕಾರ ಇದ್ರೆ ಭ್ರಷ್ಟರ ಮೇಲೆ ಏನೂ ಕ್ರಮ ತಗೋಳಲ್ಲ. ಮುಚ್ಚಾಕುವ ಪ್ರಯತ್ನ ಮಾಡಿರೋದು ಗೊತ್ತಾಗ್ತಾ ಇದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಕೇಳುವ ಪ್ರಕಾರ ತನಿಖೆ ಮಾಡಬೇಕು. ಇದನ್ನು ಇವರು ಮಾಡ್ತಾ ಇಲ್ಲ ಎಂದು ಸಿದ್ದು ಕಿಡಿಕಾರಿದರು.