ಬೆಂಗಳೂರು: ಮುರುಘಾ ಶ್ರೀಗಳ ಮೇಲೆ ಪೋಸ್ಕೊ ಕಾಯಿದೆಯಡಿ ಎಫ್.ಐ.ಆರ್.ದಾಖಲಾಗಿದ್ದು, ತನಿಖೆಯ ನಂತರ ಸತ್ಯ ಹೊರಬೀಳಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ತನಿಖೆ ಮಾಡಿದ ನಂತರ ಸತ್ಯ ಹೊರಗೆ ಬರಲಿದೆ ಎಂದು ಹೇಳಿದರು.
ಇದೊಂದು ಪ್ರಮುಖ ಪ್ರಕರಣ. ಪೋಸ್ಕೊ ಪ್ರಕರಣವೂ ಆಗಿದೆ ಹಾಗೂ ಚಿತ್ರದುರ್ಗದಲ್ಲಿ ಕಿಡ್ನಾಪ್ ಪ್ರಕರಣವೂ ದಾಖಲಾಗಿದೆ. ಎರಡೂ ಪ್ರಕರಣಗಳನ್ನು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ನಾವು ಮಾತನಾಡುವುದಾಗಲಿ, ವ್ಯಾಖ್ಯಾನ ಮಾಡುವುದಾಗಲಿ ತನಿಖೆಯ ದೃಷ್ಟಿಯಿಂದ ಸರಿಯಲ್ಲ ಎಂದು ಸಿಎಂ ಹೇಳಿದರು.
ಚಾಮರಾಜಪೇಟೆ ಈದ್ಗಾ ಮೈದಾನದ ಬಗ್ಗೆ ಗೊಂದಲ ಏನಿಲ್ಲ. ಗಣೇಶೋತ್ಸವ ಆಚರಿಸುವ ಬಗ್ಗೆ ಕಂದಾಯ ಸಚಿವರು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ.
ಅರ್ಜಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಅದಾದ ಕೂಡಲೇ ನಿರ್ಣಯ ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.

