ರಾಸಾಯನಿಕ ದುರಂತ ತಡೆಗಟ್ಟಲು ಅಣುಕು ಪ್ರದರ್ಶನ ಸಹಕಾರಿ -ಡಾ.ಕೆ.ವಿ ರಾಜೇಂದ್ರ

ಮೈಸೂರು: ರಾಸಾಯನಿಕ ದುರಂತಗಳು ಜಿಲ್ಲೆಯಲ್ಲಿ ಜರುಗದಂತೆ ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಹಾಗೂ ಈ ರೀತಿಯ ಘಟನೆಗಳು ಆಕಸ್ಮಿಕವಾಗಿ ನಡೆದಾಗ ಯಾವ ಯಾವ ಇಲಾಖೆಗಳ ಪಾತ್ರ ಏನು? ಸಾರ್ವಜನಿಕರ ಪಾತ್ರ ಏನು? ಎಂಬುದನ್ನು ತಿಳಿದುಕೊಂಡರೆ ಇಂತಹ ವಿಪತ್ತುಗಳಿಂದಾಗುವ ದೊಡ್ಡ ಅನಾಹುತಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಹಾಗೂ ಅತೀ ಅಪಾಯಕಾರಿ ಕಾರ್ಯಾಚರಣೆ ಹೊಂದಿರುವ ಕಾರ್ಖಾನೆಯಾದ ಮೆ: ಎಜಿ & ಪಿ ಸಿಟಿ ಗ್ಯಾಸ್  ಲಿ.,  ಸಹಯೋಗದೊಂದಿಗೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ರಾಸಾಯನಿಕ ವಿಪತ್ತು ನಿರ್ವಹಣೆ ಕುರಿತ ಅಣುಕು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ರೀತಿಯ ರಾಸಾಯನಿಕ ವಿಪತ್ತು ಸಂಭವಿಸಿದಲ್ಲಿ ಇದನ್ನು ನಿಯಂತ್ರಿಸುವ ಬಗ್ಗೆ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವ ಕುರಿತಂತೆ ಅಣುಕು ಪ್ರದರ್ಶನ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿನ ಅತೀ ಹೆಚ್ಚು ಅಪಾಯಕಾರಿ ಕಾರ್ಯಾಚರಣೆ ಹೊಂದಿರುವ ಕಾರ್ಖಾನೆಗಳಲ್ಲಿ ಇಂತಹ ಅಣುಕು ಪ್ರದರ್ಶನಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾಯಕ್ರಮಗಳನ್ನು ಮಾಡಬೇಕು ಎಂದು ಅವರು ತಿಳಿಸಿದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಮಂಜುನಾಥ ಸ್ವಾಮಿ, ಕಾರ್ಖಾನೆಗಳ ಜಂಟಿ ನಿರ್ದೇಶಕ ಆರ್.ಕೆ.ಪಾರ್ಥಸಾರಥಿ, ಕಾರ್ಖಾನೆಗಳ ಉಪ ನಿರ್ದೇಶಕ ಎಂ.ಎಸ್. ಮಹದೇವ್,  ಕಾರ್ಖಾನೆಗಳ ಹಿರಿಯ ಸಹಾಯಕ ನಿರ್ದೇಶಕ ಉಮೇಶ್,  ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಅರುಣ್ ನಾಯ್ಕ,  ಮೈಸೂರಿನ ವಿವಿಧ ಅತೀ ಅಪಾಯಕಾರಿ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಹಾಜರಿದ್ದರು.