ಕೋಲಾರ: ಕರ್ನಾಟಕವನ್ನು ನಂ.1 ರಾಜ್ಯವನ್ನಾಗಿ ಮಾಡುವುದು ನಮ್ಮ ಉದ್ದೇಶ ಆದರೆ ಕಾಂಗ್ರೆಸ್ನಂತಹ ಗುಜರಿ ಇಂಜಿನ್ನಿಂದ ಅದು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
ಚಿನ್ನದ ನಾಡು ಕೋಲಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭೇಟಿ ನೀಡಿ ಬಿಜೆಪಿ ಸಮಾವೇಶದಲ್ಲಿ ಭಾಷಣ ಮಾಡಿದರು.
ಚಿನ್ನದ ನಾಡು ಕೋಲಾರದಲ್ಲಿ ಜನರು ಸೇರಿರುವುದು ಕಾಂಗ್ರೆಸ್ ಮತ್ತು ಜೆಡಿಎಸ್ ನಿದ್ದೆಗೆಡಿಸುತ್ತದೆ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಈ ಎರಡೂ ಪಕ್ಷಗಳು ದೊಡ್ಡ ಅಡ್ಡಿಯುಂಟು ಮಾಡುತ್ತಿವೆ ಎಂದು ದೂರಿದರು.
ಸಾರ್ವಜನಿಕರು ಈ ಪಕ್ಷಗಳನ್ನು ಕ್ಲೀನ್ ಬೌಲ್ಡ್ ಮಾಡುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಭ್ರಷ್ಟ ಸರಕಾರದಿಂದ ಕರ್ನಾಟಕದ ಜನತೆಯನ್ನು ರಕ್ಷಿಸಬೇಕು. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಸ್ಪಷ್ಟವಾಗಿ ಹೇಳಿದರು.
ಈ ಬಾರಿಯ ಚುನಾವಣೆ ಬರೀ ಶಾಸಕರ ಆಯ್ಕೆ, ಮುಖ್ಯಮಂತ್ರಿ ಮಾಡಲು ಅಲ್ಲ, ಮುಂದಿನ 25 ವರ್ಷಗಳ ಕಾಲ ಕರ್ನಾಟಕವನ್ನು ಅಭಿವೃದ್ಧಿ ರಾಜ್ಯ ಮಾಡುವುದಾಗಿದೆ ಎಂದು ಸ್ಪಷ್ಟಪಡಿಸಿದರು.
ಅಸ್ತಿರ ಸರ್ಕಾರವಿದ್ದರೇ ಲಾಭಕ್ಕಿಂತ ನಷ್ಟವೇ ಜಾಸ್ತಿ. ಅಸ್ತಿರ ಸರ್ಕಾರದಿಂದ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳನ್ನು ಅಧಿಕಾರದಿಂದ ದೂರವಿಡೋಣ ಎಂದು ಪ್ರಧಾನಿ ಕರೆನೀಡಿದರು.
ದಶಕದಿಂದ ನೆನೆಗುದಿಗೆ ಬಿದ್ದಿದ್ದ ಎಲ್ಲ ಕೆಲಸ ಬಿಜೆಪಿ ಮಾಡಿದೆ. ಬಿಜೆಪಿಗೆ ನೀಡುವ ನಿಮ್ಮ ಒಂದು ಮತದಿಂದ ಸಾಕಷ್ಟು ಬದಲಾವಣೆಗಳಾಗುತ್ತವೆ.
ಬಹುಮತದ ಒಂದು ಸರ್ಕಾರ ಅಧಿಕಾರಕ್ಕೆ ಬಂದರೇ ಸಾಕಷ್ಟು ಬದಲಾವಣೆಯಾಗುತ್ತದೆ. ನಮ್ಮ ಆರ್ಥಿಕತೆಗೆ ಸಾಕಷ್ಟು ಉತ್ತೇಜನ ಸಿಕ್ಕಿದೆ. ಕೊರೋನಾ ಕಾಲದಲ್ಲಿ ನಾವು ಮಾಡಿದ ಕಾರ್ಯ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ನಮ್ಮ ವ್ಯಾಕ್ಸಿನೇಷನ್ ಮೂಲಕ ಭಾರತದ ಸಾಮರ್ಥ್ಯ ಜಗತ್ತಿಗೆ ಗೊತ್ತಾಗಿದೆ ಎಂದು ಮೋದಿ ಹೇಳಿದರು.
ಡಬಲ್ ಇಂಜಿನ್ ಸರ್ಕಾರವಿದ್ದರೇ ಸಾಕಷ್ಟು ಅಭಿವೃದ್ದಿಯಾಗುತ್ತದೆ. ಕೇಂದ್ರದಲ್ಲಿರುವ ಪ್ರಬಲವಾದ ಬಿಜೆಪಿ ಇಂಜಿನ್ ತರಹ ಕರ್ನಾಟಕದಲ್ಲೂ ಗಟ್ಟಿಯಾದ ಇಂಜಿನ್ ಅಧಿಕಾರಕ್ಕೆ ಬರಬೇಕು.
ಡಬಲ್ ಇಂಜಿನ್ ಸರ್ಕಾರದ ಮೂಲಕ ಕೋಲಾರಕ್ಕೆ ಅನೇಕ ಕೈಗಾರಿಕೆಗಳು ಬರುತ್ತಿವೆ. ಮುಳಬಾಗಿಲಿನ ದೋಸೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಕಾಂಗ್ರೆಸ್ನ ಸುಳ್ಳು ಗ್ಯಾರೆಂಟಿ ಯೋಜನೆ ಜಾರಿಗೆ ಬರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
2005 ರಿಂದ 2014ರವರೆಗೂ 10 ವರ್ಷ ಸುಳ್ಳು ಆಶ್ವಾಸನೆಗಳನ್ನು ನೀಡಿದೆ. ಕಾಂಗ್ರೆಸ್ ದೇಶದ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡುತ್ತೇವೆ ಎಂದು ಆಶ್ವಾಸನೆ ನೀಡಿತ್ತು. ಆದರೆ, ಅನೇಕ ಹಳ್ಳಿಗಳು ವಿದ್ಯುತ್ ಇಲ್ಲದೆ ಕತ್ತಲಿನಲ್ಲಿ ಕಾಲ ಕಳೆದವು. ಕಾಂಗ್ರೆಸ್ ದೇಶದ ಜನಕ್ಕೆ ಮೋಸ ಮಾಡಿದೆ. ನಂತರ ನಾವು ಸಾವಿರ ದಿನಗಳಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಸಿದ್ದೇವೆ ಎಂದು ನರೇಂದ್ರ ಮೋದಿ ತಿಳಿಸಿದರು.

