ಮೈಸೂರು: ಸಾಂಸ್ಕೃತಿಕ ನಗರಿಯ ಯುವಕ ಕೆತ್ತಿರುವ ರಾಮಲಲ್ಲಾ ಮೂರ್ತಿ
ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಆಗಲಿದೆ.ಇದು ರಾಜ್ಯ ಹಾಗೂ ಮೈಸೂರಿಗರಿಗೆ ಅತ್ಯಂತ ಹೆಮ್ಮೆಯ ವಿಷಯ.
ಕೋಟ್ಯಾಂತರ ರಾಮ ಭಕ್ತರ ಕನಸು ನನಸಾಗುವ ದಿನ ಹತ್ತಿರವಾಗಿದೆ.
ಇದೇ ಜನವರಿ 22ರಂದು ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ ಕಣ್ ತುಂಬಿಕೊಳ್ಳಲು ಕೋಟ್ಯಂತರ ಮಂದಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಮೂರು ಮಂದಿ ಶಿಲ್ಪಿಗಳು ರಾಮನ 3 ವಿಗ್ರಹಗಳನ್ನು ಸುಂದರವಾಗಿ ಕೆತ್ತಿದ್ದಾರೆ.
ಈ ಮೂರು ವಿಗ್ರಹಗಳ ಪೈಕಿ ಮೈಸೂರಿನ ಅರುಣ್ ಕೆತ್ತಿರುವ ಬಾಲ ರಾಮನ ಮೂರ್ತಿ 2024ರ ಜನವರಿ 22ರಂದು ಪ್ರತಿಷ್ಟಾಪನೆ ಆಗಲಿದೆ.
ಪ್ರಖ್ಯಾತ ಶಿಲ್ಪಿಗಳಾದ ಮೈಸೂರಿನ ಅರುಣ್ ಯೋಗಿರಾಜ್, ಬೆಂಗಳೂರಿನ ಜಿ.ಎಲ್.ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಪ್ರತ್ಯೇಕವಾಗಿ ರಾಮನ ಮೂರ್ತಿ ಕೆತ್ತನೆ ಮಾಡಿದ್ದಾರೆ.
ಅರುಣ್ ಅವರು ಕೆತ್ತಿರುವ ಐದು ವರ್ಷದ ಮಗುವಿನಂತೆ ಬಿಲ್ಲು ಮತ್ತು ಬಾಣವನ್ನು ಹಿಡಿದಿರುವ ಭಗವಾನ್ ರಾಮನ ಮೂರ್ತಿ ಪ್ರತಷ್ಟಾಪನೆಗೆ ಆಯ್ಕೆಯಾಗಿದೆ.
ರಾಮಲಲ್ಲಾ ಮೂರ್ತಿ ಅಡಿಯಿಂದ ಹಣೆಯವರೆಗೆ 51 ಇಂಚು ಎತ್ತರವಿದ್ದು, ಪ್ರತಿಮೆಯು ಪ್ರಭಾವಳಿ ಸೇರಿದಂತೆ ಎಂಟು ಅಡಿ ಎತ್ತರ ಮೂರೂವರೆ ಅಡಿ ಅಗಲ ಹೊಂದಿದೆ.
ರಾಮನ ಪ್ರತಿಮೆಯನ್ನು ಪೂರ್ಣಗೊಳಿಸಲು ಶಿಲ್ಪಿ 6 ತಿಂಗಳುಗಳಕಾಲ ತೆಗೆದುಕೊಂಡಿದ್ದಾರೆ.
ಮೈಸೂರಿನ ಹಾರೋಹಳ್ಳಿಯಲ್ಲಿ ಸಿಕ್ಕಂತಹ ಶಿಲೆಯಿಂದ ಈ ವಿಗ್ರಹವನ್ನು ಕೆತ್ತಲಾಗಿದೆ.
ರಾಮಮಂದಿರ ನಿರ್ಮಾಣ ಸಮಿತಿ ಮೂರು ಪ್ರತಿಮೆಗಳ ಪೈಕಿ ಅರುಣ್ ಅವರು ಕೆತ್ತಿರುವ ಪ್ರತಿಮೆಯನ್ನು ಆಯ್ಕೆ ಮಾಡಿದೆ.
ಅರುಣ್ ಎಂಬಿಎ ಪದವೀಧರರಾಗಿದ್ದು, ಐದನೇ ತಲೆಮಾರಿನ ಶಿಲ್ಪಿಯಾಗಿದ್ದಾರೆ.
ಅವರು 2008ರಲ್ಲಿ ಪ್ರತಿಮೆಗಳನ್ನು ಕೆತ್ತುವ ಸಂಪ್ರದಾಯವನ್ನು ಮುಂದುವರಿಸಿದ್ದು, ಈವರೆಗೆ 1,000ಕ್ಕೂ ಹೆಚ್ಚು ಪ್ರತಿಮೆಗಳನ್ನು ಕಡೆದು ನಿಲ್ಲಿಸಿದ್ದಾರೆ.
ಅಂತಿಮಗೊಂಡರಾಮನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಮೋದಿ ಅವರು ಈಗಾಗಲೇ ಅರುಣ್ ಕೆತ್ತಿರುವ ಶಂಕರಾಚಾರ್ಯ, ಸುಭಾಷ್ ಚಂದ್ರ ಬೋಸ್ ವಿಗ್ರಹಗಳನ್ನು ಲೋಕಾರ್ಪಣೆ ಮಾಡಿದ್ದು ಈಗ ರಾಮಲಲ್ಲ ಮೂರ್ತಿಯನ್ನು ಉದ್ಘಾಟಿಸಲಿರುವುದು ನಿಜಕ್ಕೂ ವಿಶೇಷ.

