ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಮುಂಜಾನೆ 7 ಗಂಟೆಗೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಮೊದಲು ಈರುಳ್ಳಿ ಮಂಡಿಗೆ ಭೇಟಿ ನೀಡಿದ ಸಿಎಂ, ಸ್ಥಳೀಯ ವರ್ತಕರು, ರೈತರು ಮತ್ತು ಕೂಲಿಕಾರರೊಂದಿಗೆ ಕುಳಿತು ಸಮಸ್ಯೆಗಳನ್ನು ಆಲಿಸಿದರು.
ನಂತರ ಮಾರುಕಟ್ಟೆ ಪರಿಶೀಲನೆ ವೇಳೆ ರಸ್ತೆ ಬದಿಯ ಸಣ್ಣ ಪೆಟ್ಟಿಗೆ ಹೋಟೆಲ್ಗೆ ತೆರಳಿದ ಡಿ.ಕೆ. ಶಿವಕುಮಾರ್, ಅಲ್ಲಿನ ಕೂಲಿ ಕಾರ್ಮಿಕರ ಜೊತೆಯಲ್ಲೇ ಕುಳಿತು ಇಡ್ಲಿ ಸವಿದರು.
ಈ ವೇಳೆ ತಮ್ಮೊಂದಿಗೆ ಕೂಲಿಕಾರರನ್ನೂ ಕೂರಿಸಿಕೊಂಡು ಅವರ ಜೊತೆಯಲ್ಲೇ ಇಡ್ಲಿ ಸಾಂವಾರ್ ತಿಂದರು.ನಂತರ ಉಪಹಾರದ ಬಿಲ್ ಪಾವತಿಸಲು ಮುಂದಾಗಿ ಹೋಟೆಲ್ ಮಾಲೀಕರಿಗೆ 500 ರೂ. ನೀಡಿ ಕೂಲಿಕಾರರ ಬಳಿ ಹಣ ಪಡೆಯಬೇಡಿ ಎಂದು ಹೇಳಿದರು.
ಮಾರುಕಟ್ಟಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರೊಂದಿಗೂ ಕುಳಿತು ಅಹವಾಲು ಆಲಿಸಿದ ಸಿಎಂ ಡಿ.ಕೆ.ಶಿವಕುಮಾರ್ ಅವರೊಟ್ಟಿಗೆ ಟೀ ಸೇವಿಸಿದರು.
ಈ ಸಂದರ್ಭದಲ್ಲಿ ಈರುಳ್ಳಿ,ಆಲೂಗಡ್ಡೆ,ಶುಂಠಿ ಮತ್ತಿತರ ವ್ಯಾಪಾರಿಗಳ ಬಳಿಗೆ ತೆರಳಿ ಪರಿಶೀಲಿಸಿ ಸಮಸ್ಯೆ ಆಲಿಸಿದರು.ಈ ವೇಳೆ ಮಾರುಕಟ್ಟೆಯ ದುರವಸ್ಥೆ ಮತ್ತು ಅವ್ಯವಸ್ಥೆಗಳ ಕುರಿತು ವ್ಯಾಪಾರಿಗಳು ಮನವಿ ಸಲ್ಲಿಸಿದರು.

