ಆಸೆ ಆಮಿಷಗಳಿಗೆ ಒಳಗಾಗದೆ ನೈತಿಕ ಮತದಾನ ಮಾಡಿ: ದಿನೇಶ್ ಸಲಹೆ

ಮೈಸೂರು: ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನೈತಿಕ ಮತದಾನ ಮಾಡಬೇಕೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ದಿನೇಶ್ ತಿಳಿಸಿದರು.

ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಶಾಹಿ ಎಕ್ಸ್ ಪೊರ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಘಟಕ 37 ಮತ್ತು ಘಟಕ 42 ರಲ್ಲಿ ನಡೆದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂವಿಧಾನವು 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯನಿಗೂ ಮತಚಲಾಯಿಸುವ ಹಕ್ಕನ್ನು ನೀಡಿದೆ, ಅದನ್ನು ಸರಿಯಾದ ಸಮಯದಲ್ಲಿ ಬಳಸಿಕೊಂಡು ಉತ್ತಮ ಪ್ರಜಾಪ್ರಭುತ್ವವನ್ನು ನಿರ್ಮಿಸಬೇಕು ಎಂದು ಹೇಳಿದರು.

ಈ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಲು ಚುನಾವಣಾ ಆಯೋಗವು ವ್ಯಾಪಾಕವಾಗಿ ಪ್ರಚಾರ ಮಾಡುತ್ತಿದೆ. ಹಾಗಾಗಿ ಕಡ್ಡಾಯವಾಗಿ ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂದು ಹೇಳಿದರು.

ಮತದಾರರು ಚುನಾವಣೆಯ ಬಗ್ಗೆ ಯಾವುದೇ ಮಾಹಿತಿ ಬೇಕಿದ್ದರು ವೋಟರ್ ಹೆಲ್ಪಿಂಗ್ ಆಪ್ ಡೌನ್ಲೋಡ್ ಮಾಡಿಕೊಂಡು  ಪಡೆಯಬಹುದಾಗಿದೆ ಎಂದರು.

ಮತದಾರರಿಗೆ ಯಾವುದೇ ರೀತಿಯ ದೂರು ಹಾಗೂ ದುಷ್ಕೃತ್ಯಗಳು  ಕಂಡುಬಂದಲ್ಲಿ  ಸಿ-ವಿಜಿಲ್ ಆಪ್ ಮೂಲಕ ಸಲ್ಲಿಸಬಹುದು ಎಂದು ದಿನೇಶ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಹಿ ಎಕ್ಸ್ ಪೋರ್ಟ್ 37 ರ ಘಟಕ  ಮುಖ್ಯಸ್ಥರಾದ ಗುರುಮೂರ್ತಿ ಜೆ ಸಿ, ಘಟಕ 42 ರ ಮುಖ್ಯಸ್ಥರಾದ ಸಂತೋಷ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಶುಭ್ ದೇವರಾಜೇ ಅರಸ್, ಕಾರ್ಮಿಕ ಕಲ್ಯಾಣಧಿಕಾರಿ ಚೈತ್ರ ಮತ್ತಿತರರು ಉಪಸ್ಥಿತರಿದ್ದರು.