ಶ್ರೇಷ್ಠ ಕಲಾವಿದ-೨

-ಜಿ.ಆರ್.ಸತ್ಯಲಿಂಗರಾಜು
ಸಿನಿಮಾ ಕಲಾವಿದ ಶ್ರೇಷ್ಠ ಎನಿಸಿಕೊಳ್ಳಲು ಗಮನದಲ್ಲಿ ಇಟ್ಟಿರಬೇಕಾದ ಮೂರನೇ ಅಂಶವೆಂದರೆ ನಾಟಕದ ಕಲಾವಿದರು ತನ್ನ ಪಾತ್ರಕ್ಕೆ ಸಿದ್ಧರಾಗಲು ಕಾಲಾವಕಾಶ ಇರುತ್ತೆ, ಒಂದೇ ದಿನದಲ್ಲಿ ಆ ಪಾತ್ರ ಮುಗಿಸಬೇಕು, ಹೀಗಾಗಿ ಪಾತ್ರದ ಸರಣಿ ಇರುತ್ತೆ. ಅಂದರೆ ಒಂದರ ನಂತರದ ಇನ್ನೊಂದು ದೃಶ್ಯ ಪೂರಕವಾದುದೇ ಆಗಿರುತ್ತೆ. ಸಿನಿಮಾ ಹೀಗಲ್ಲ. ಸರಣಿ ಪಾತ್ರ ರಚನೆ ಇರಲ್ಲ, ಅಭಿನಯ ತುಂಡುತುಂಡು ಇರುತ್ತೆ. ಕ್ಯಾಮರಾ ಚಾಲನೆಯಾದಾಗ ನಟ ಸಂಬಂಧಿಸಿದ ಅಭಿನಯದ ತುಂಡು ಅಭಿಯಿಸಬೇಕು, ಅದರ ಮುಂದಿನ ತುಂಡು ಇನ್ಯಾವಾಗಲೋ ತೆಗೆದಾಗಲೂ ಹಿಂದಿನ ತುಂಡಿನಲ್ಲಿದ್ದ ತನ್ಮಯತೆ ತೋರಿಸಿದಾಗಲೇ ಅಭಿನಯದಲ್ಲಿ ಶ್ರೇಷ್ಢತೆ ಉಳಿಯುತ್ತೆ.
ಐದನೆಯದಾಗಿ, ಸಂಕಲನ (ಎಡಿಟಿಂಗ್) ಇರುತ್ತೆ, ಅದು ತುಂಡು ತುಂಡು ನಟನೆಯನ್ನ ಅನುಕ್ರಮವಾಗಿ ಜೋಡಿಸಿ, ಉಪಯುಕ್ತ ರೂಪ ಕೊಡುತ್ತೆ ಎಂಬ ಅರಿವು ಕಲಾವಿದರಿಗೆ ಇದ್ದಾಗ, ತುಂಡು ಅಭಿಯದಲ್ಲು ಅಂಗಗಳು ಹಾವಭಾವದಲ್ಲಿ ಏರಿಳಿತದ ಸಾಮ್ಯತೆ ಉಳಿಸಿಕೊಳ್ಳುವುದು ಸಾಧ್ಯ.
ನಾಟಕ ನಟನಿಗೆ ಸಂಕಲನ ಇರಲ್ಲ. ಆ ದಿನದ ನಟನೆ ಮುಗಿದರೆ, ಮಾರನೆ ದಿನದ ನಟನೆ ಸಂಪೂರ್ಣ ಹೊಸತಾಗಿರುತ್ತೆ. ಚಿತ್ರ ನಟ, ಚಿತ್ರ ಪೂರ್ತಿ ಆಗುವವರೆಗೂ ತನ್ನ ಪಾತ್ರದ ಹಳೆ ತುಂಡು ಅಭಿನಯ ಮರೆಯಬಾರದು, ಹೊಸತನ್ನೂ ಸೇರಿಸಿಕೊಳ್ಳಬಾರದು.
ಒಂದೇ ಬಗೆಯ ಪಾತ್ರ ಪೋಷಣೆ ಮಾಡಬೇಕು. ಇವನ ತುಂಡು ತುಂಡು ಅಭಿನಯವನ್ನ ಸಂಕಲನ ಮಾಡಿದಾಗ ಇವನ ಅಭಿನಯ ಮುಗಿಯುತ್ತೆ.
ಕ್ಲೋಸಪ್, ಸಂಭಾಷಣೆ ತುಣುಕು ಹಲವೇಳೆ ಸ್ಥಾನಪಲ್ಲಟವಾಗಿ ಸೇರಿಕೆಯಾಗುತ್ತೆ, ಪ್ರತೀ ದೃಶ್ಯ ಸರಳವಾಗಿ ಅಭಿನಯಿಸಬೇಕು, ಸಣ್ಣ ದೋಷ ಅಥವಾ ವ್ಯತ್ಯಾಸವಾದರೂ ಸಂಕಲನಕಾರ ಪರದಾಡುವಂತೆ ಆಗುತ್ತೆ ಎಂಬ ಅರಿವು ಇರಬೇಕು. ಹೀಗಿದ್ದಾಗ ಮಾತ್ರ ಒಂದು ಶಾಟ್ ನಲ್ಲಿ ಕೈ ಎತ್ತಿದ್ದು, ಮುಂದಿನ ಶಾಟ್ ಅದ್ಯಾವಾಗಲೋ ತೆಗೆಯುವಾಗ ಕೈ ಇಳಿಸಲಾರ. ಇಂತಹ ತಪ್ಪು ಮಾಡದವನೇ ಶ್ರೇಷ್ಠ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ. ಈ ಐದು ಅಂಶಗಳೊಡನೆ, ಭಾವನಾ ಶಕ್ತಿ ಇರಲೇಬೇಕು. ಭಾವನೆ ಇಲ್ಲದೆ ಪಾತ್ರ ನಿರ್ವಹಣೆ ಅಸಾಧ್ಯ. ಭಾವನೆವೃದ್ಧಿ ಮಾಡಿಕೊಳ್ಳುವುದು ನಟನ ಕರ್ತವ್ಯವೂ ಹೌದು.