ಕರ್ತವ್ಯ ಲೋಪ: ನೂಡಲ್ ಅಧಿಕಾರಿ ಅಮಾನತು

ಮೈಸೂರು: ಲೋಕಸಭೆ ಚುನಾವಣಾ ಹಿನ್ನೆಲೆಯಲ್ಲಿ ಕರ್ತವ್ಯಲೋಪ ಎಸಗಿದ ನೂಡಲ್ ಅಧಿಕಾರಿಯೊಬ್ಬರು ಅಮಾನತುಗೊಂಡಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳ ಸ್ಟ್ರಾಂಗ್ ರೂಂ ನಿರ್ವಹಣೆಯಲ್ಲಿ ಲೋಪವೆಸಗಿದ ಆರೋಪದಡಿ ಮೈಸೂರು ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲ ಅಭಿಯಂತರರು ಹಾಗೂ ಸ್ಟ್ರಾಂಗ್ ರೂಂ ಮತ್ತು ಮ್ಯಾನ್ ಪವರ್ ನೂಡಲ್ ಅಧಿಕಾರಿ ರಾಜೀವ್ ನಾಥ್ ರನ್ನು ಅಮಾನತುಪಡಿಸಿ
ಮೈಸೂರು ಜಿಲ್ಲಾಧಿಕಾರಿಗಳು ಹಾಗೂ ಚುನಾವಣಾಧಿಕಾರಿ ಗಳೂ ಆದ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವಿದ್ಯುನ್ಮಾನ ಮತಯಂತ್ರಗಳ ವಾಹನವನ್ನ ಜೆ.ಎಸ್.ಎಸ್.ಕಲಾ ಮತ್ತು ವಿಜ್ಞಾನ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಇರಿಸುವ ಕರ್ತವ್ಯದಲ್ಲಿ ಲೋಪವೆಸಗಿದ ಆರೋಪದ ಹಿನ್ನಲೆ ಜಿಲ್ಲಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಕಾಲೇಜಿನ ಆಡಳಿತ ಮಂಡಳಿ ಜೊತೆ ವ್ಯವಹರಿಸಿ ಮುಖ್ಯದ್ವಾರ ತೆರೆಸುವ ವ್ಯವಸ್ಥೆ ಮಾಡಿಲ್ಲ ಈ ಕಾರಣ ವಿದ್ಯುನ್ಮಾನ ಮತಯಂತ್ರಗಳಿದ್ದ ವಾಹನ ಸುಮಾರು ಅರ್ಧಗಂಟೆ ಕಾಲ ರಸ್ತೆಯಲ್ಲೇ ನಿಲ್ಲಬೇಕಾಯಿತು.

ಅಲ್ಲದೆ ವಿದ್ಯುನ್ಮಾನ ಮತಯಂತ್ರಗಳನ್ನ ಸ್ಟ್ರಾಂಗ್ ರೂಂ ನಲ್ಲಿ ಶೇಖರಿಸಿಡಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರಲಿಲ್ಲ, ಸರಿಯಾದ ಸಮಯದಲ್ಲಿ ಮರದ ಬಾಗಿಲು ತೆರೆಸಲು ಕಾರ್ಪೆಂಟರ್ ಕರೆಸಲು ವ್ಯವಸ್ಥೆ ಮಾಡಿಲ್ಲ, ವಿದ್ಯುನ್ಮಾನ ಮತಯಂತ್ರಗಳನ್ನ ಸಾಗಿಸುವಾಗಲೂ ಖುದ್ದು ಹಾಜರಿರಲಿಲ್ಲ,ಈ ಎಲ್ಲಾ ಆರೋಪಗಳು ಮೇಲ್ನೋಟಕ್ಕೆ ಸಾಬೀತಾದ ಕಾರಣ ಡಾ.ಕೆ.ವಿ.ರಾಜೇಂದ್ರ ರವರು ರಾಜೀವ್ ನಾಥ್ ರನ್ನ ಅಮಾನತ್ತಿನಲ್ಲಿಟ್ಟು ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.