ಸ್ವಚ್ಛತಾ ಕಾರ್ಯಕ್ಕಿಳಿದ ಯದುವೀರ್ ದಂಪತಿ!

ಮೈಸೂರು: ರಾಜನಾದರೇನು ತಾವೂ ಕೂಡಾ ಸಾಮಾನ್ಯ ಪ್ರಜೆ ಎಂಬುದನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಬೀತು ಮಾಡಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಯದುವೀರ್ ತಮ್ಮ ಪತ್ನಿ ತ್ರಿಶಿಖಾ ಒಡೆಯರ್ ಅವರೊಂದಿಗೆ ಮಹಾರಾಜ ಕಾಲೇಜು ಮೈದಾನವನ್ನು ಸ್ವಚ್ಛಗೊಳಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.

ಮೋದಿ ಅವರ ಸಮಾವೇಶದ ನಂತರ ಮೈದಾನ ಜನ ಜಂಗುಳಿ ಯಿಂದಾಗಿ ಕಸದಿಂದ ತುಂಬಿತ್ತು.ಅಲ್ಲಲ್ಲಿ ಹರಡಿದ್ದ ಕಸವನ್ನು ಯದುವೀರ್ ಅವರೊಂದಿಗೆ ಅವರ ಅಭಿಮಾನಿಗಳು,ಕೆಲವು ಸ್ವಯಂಸೇವಕರು ಮತ್ತು ನಗರಪಾಲಿಕೆ ಸಿಬ್ಬಂದಿಗಳು ಸೇರಿ ಸ್ವಚ್ಚಗೊಳಿಸಿದರು. ಇದಕ್ಕೆ ತ್ರಿಶಿಕಾ ಸಾಥ್ ನೀಡಿದುದು ವಿಶೇಷ.

ಯದುವೀರ್ ದಂಪತಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದು ಕಂಡು ಜನತೆ ಆಶ್ಚರ್ಯ ಪಟ್ಟರಲ್ಲದೆ ಜನ ಸಾಮಾನ್ಯರಂತೆ ನಡೆದುಕೊಳ್ಳುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಸ್ವಚ್ಚತಾ ಕಾರ್ಯದಲ್ಲಿ ಭಾಗಿಯಾದ ಕಾರ್ಮಿಕರಿಗೆ ಈ ವೇಳೆ ಯದುವೀರ್ ಕೃತಜ್ಞತೆ ಸಲ್ಲಿಸಿ ಕಸವನ್ನು ಆದಷ್ಟು ಬೇಗ ಮೈದಾನದಿಂದ ತೆರವುಗೊಳಿಸುವಂತೆ ಮನವಿ ಮಾಡಿದರು.

ಯದುವೀರ್ ಅವರು ಮಾತನಾಡಿ,ನಗರವು ಯಾವಾಗಲೂ ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ, ಮೋದಿಜಿಯವರ ಕಾರ್ಯಕ್ರಮದ ನಂತರ ಮೈದಾನವನ್ನು ಸ್ವಚ್ಛವಾಗಿರಿಸಿಕೊಳ್ಳುವುದು ನನ್ನ ಕರ್ತವ್ಯವಾಗಿದೆ ಮತ್ತು ನಗರವನ್ನು ಸ್ವಚ್ಛವಾಗಿಡುವುದು ನಮ್ಮ ಪ್ರಧಾನಮಂತ್ರಿ ಉಪಕ್ರಮದ ಸ್ವಚ್ಛ ಭಾರತ್ ಅಭಿಯಾನಕ್ಕೆ ಅನುಗುಣವಾಗಿದೆ, ನಮ್ಮ
ಮೈಸೂರು ನಗರದ ಸ್ವಚ್ಟತೆಗೆ ನನ್ನ ಮೊದಲ ಆದ್ಯತೆ‌ ಇದು ಇನ್ನು ಸದಾ ಮುಂದುವರೆಯುತ್ತದೆ ಎಂದು ಹೇಳಿದರು.