ಯಾವಾಗಿನಿಂದ ಸಿದ್ದರಾಮಯ್ಯ ಭವಿಷ್ಯ ಹೇಳೋದನ್ನ ಕಲಿತರೊ:ಹೆಚ್ ಡಿ ಕೆ ಪ್ರಶ್ನೆ

ಮೈಸೂರು: ಸಿದ್ದರಾಮಯ್ಯ ಅವರು ಅದ್ಯಾವಾಗಿನಿಂದ ಭವಿಷ್ಯ ಹೇಳುವುದನ್ನು ಆರಂಭಿಸಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವ್ಯಂಗ್ಯ ವಾಗಿ ಪ್ರಶ್ನಿಸಿದರು.

ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಕುಮಾರಸ್ವಾಮಿ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದರೆ ಸೋಲುತ್ತಾರೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ, ಎಂದಿನಿಂದ ಭವಿಷ್ಯ ಹೇಳುವುದನ್ನು ಕಲಿತುಕೊಂಡರೊ ಎಂದು ಕೇಳಿದರು.

ಚುನಾವಣೆಯ ನಂತರ ಫಲಿತಾಂಶ ಬರಲಿ ಯಾರು ಸೋಲುತ್ತಾರೆ ಯಾರು ಗೆಲ್ಲುತ್ತಾರೆ ನೋಡೊಣ ಎಂದು ಮಾರ್ಮಿಕವಾಗಿ ನುಡಿದರು.

ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಯಾವುದೇ ಗೊಂದಲ ಇಲ್ಲ 2014 ರಿಂದಲೂ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಂದರ್ಥದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ ಆದರೆ ಈ ಬಾರಿ ಲೋಕಸಭಾ ಚುನಾವಣೆಗೂ ಮುನ್ನವೇ ಮೈತ್ರಿ ಮಾಡಿಕೊಂಡಿರುವುದರಿಂದ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಎಚ್ಡಿಕೆ ಅವರು ಅಧಿಕಾರದಲ್ಲಿದ್ದಾಗಲೇ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ ಈಗ ಗೆಲ್ಲುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗಲೇ ಸೋತಿದ್ದಾರೆ ಅದನ್ನು ಅವರು ಮರೆತಿದ್ದಾರಾ ಎಂದು ಚಾಟಿ ಬೀಸಿದರು.