ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಕಟ್ಟೆಚ್ಚರ: ನೆಗೆಟಿವ್ ವರದಿ ಇದ್ದರಷ್ಟೇ ಎಂಟ್ರಿ

ಬೆಂಗಳೂರು:ಮಹಾರಾಷ್ಟ್ರದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಮಹಾರಾಷ್ಟ್ರದಿಂದ ನಮ್ಮ ರಾಜ್ಯಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಜೊತೆಗೆ ಎರಡು ಡೋಸ್ ವಾಕ್ಸಿನ್ ಮಾಡಿಸಿಕೊಂಡಿರಲೇಬೇಕು.

ಒಂದು ವೇಳೆ ಹಾಗೆಯೇ ಬರುವ ಪ್ರಯಾಣಿಕರನ್ನು ಗಡಿಯಲ್ಲಿ ತಪಾಸಣೆ ಮಾಡಿ ವಾಪಸ್ ಕಳುಹಿಸಲಾಗುತ್ತಿದೆ.

ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್‍ ಪೋಸ್ಟ್ ನಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವೇಶ ಪಡೆಯುವ ವಾಹನಗಳನ್ನು ಈ ಭಾಗದಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

ಆರ್‍ಟಿಪಿಸಿಆರ್ ನೆಗೆಟಿವ್‍ ವರದಿ ಕಡ್ಡಾಯ ಮಾಡಿರುವುದರಿಂದ ಮಹಾರಾಷ್ಟದಿಂದ ರಾಜ್ಯಕ್ಕೆ ಆಗಮಿಸಿದ ಮಂಗಳೂರು, ಬೆಂಗಳೂರು, ಮೈಸೂರಿಗೆ ತೆರಳುವ ವಾಹನಗಳನ್ನು ಮಹಾರಾಷ್ಟ್ರಕ್ಕೆ ವಾಪಸ್ ಕಳುಹಿಸಲಾಯಿತು.

ಕೋವಿಡ್ ನೆಗೆಟಿವ್ ವರದಿ ಇಲ್ಲದೆ ಬರುವ ಪ್ರಯಾಣಿಕರು ಸೇರಿದಂತೆ ಬಸ್‍ಗಳ ಸಮೇತ ಗಡಿಭಾಗದಲ್ಲಿ ವಾಪಸ್ ಕಳುಹಿಸುತ್ತಿರುವ ದೃಶ್ಯ ಕಂಡುಬರುತ್ತಿದೆ.

ಕೊರೊನಾ ಮೊದಲ ಮತ್ತು ಎರಡನೇ ಅಲೆ ಸಂದರ್ಭದಲ್ಲಿ ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿತ್ತು.ಆದರೂ ಸಾಕಷ್ಟು ಜನ ಪೊಲೀಸರ ಕಣ್ ತಪ್ಪಿಸಿ ವಾಮ ಮಾರ್ಗದ ಮೂಲಕ ರಾಜ್ಯ ಪ್ರವೇಶ ಮಾಡಿದ್ದರು.

ಹೀಗಾಗಿ ಆ ಭಾಗಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿತ್ತು. ಈಗ ರಾಜ್ಯದಲ್ಲಿ 3ನೇ ಅಲೆ ಭೀತಿ ಎದುರಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗಡಿಭಾಗದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.