ಮೈಸೂರು: ರೈಲ್ವೆ ಸಂರಕ್ಷಣಾ ದಳ ಮೈಸೂರು ವಿಭಾಗದ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಬೈಕ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್ ರವರು ಮೈಸೂರು ರೈಲ್ವೆ ನಿಲ್ದಾಣದ ಬಳಿ ಬೈಕ್ ಅಭಿಯಾನಕ್ಕೆ ಚಾಲನೆ ನೀಡಿದರು.
ರೈಲ್ವೆ ಸಂರಕ್ಷಣಾ ದಳದ ಸುಮಾರು 10 ಸಿಬ್ಬಂದಿ 5 ಬೈಕ್ಗಳಲ್ಲಿ ವಿವಿಧ ರಾಜ್ಯಗಳ ಮುಖಾಂತರ ಸಂಚರಿಸಿ ಆಗಸ್ಟ್ 14 ರಂದು ನವದೆಹಲಿ ತಲುಪಲಿದ್ದಾರೆ.
ಈ ವೇಳೆ ರಾಹುಲ್ ಅಗರ್ವಾಲ್ ಮಾತನಾಡಿ ಕೇಂದ್ರ ಸರ್ಕಾರವು 75 ವರ್ಷಗಳ ಸ್ವಾತಂತ್ರ್ಯ ಆಚರಣೆಯ ಸ್ಮರಣಾರ್ಥ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಬೈಕ್ ಅಭಿಯಾನ ಆಯೋಜಿಸಿದೆ ಎಂದು ಹೇಳಿದರು.
ಆಜಾದಿ ಕಾ ಅಮೃತ್ ಮಹೋತ್ಸವ್ ಮತ್ತು ರೈಲ್ವೆ ಸಂರಕ್ಷಣಾ ಪಡೆಗಳ ಸಾಧನೆಗಳ ಕುರಿತು ಸಂದೇಶ ತಲುಪಿಸಲು ಹಾಗೂ ಜಾಗೃತಿಯನ್ನು ಅಭಿಯಾನದಲ್ಲಿ ಭಾಗವಹಿಸುವವರು ಮೂಡಿಸಲಿದ್ದಾರೆ.
ಮೈಸೂರು ವಿಭಾಗದ ವಿಭಾಗೀಯ ಸಂರಕ್ಷಣಾ ಆಯುಕ್ತ ಥಾಮಸ್ ಜಾನ್, ಹಿರಿಯ ವಿಭಾಗೀಯ ವಿತ್ತೀಯ ವ್ಯವಸ್ಥಾಪಕ ಲೆವಿನ್ ಪ್ರಭು ಮತ್ತು ಇತರ ಹಿರಿಯ ಅಧಿಕಾರಿಗಳು ಹಾಜರಿದ್ದರು.

