ಬೆಂಗಳೂರು: ಪಿ ಎಸ್ ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದ್ದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.
ಸಿಐಡಿ ಪೊಲೀಸರು ಅಮೃತ್ ಪೌಲರನ್ನು ವಿಚಾರಣೆಗೆ ಕರೆಸಿದ್ದರು.ಈ ವೇಳೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಸಿಐಡಿ ಪೊಲೀಸ್ ಹಿರಿಯ ಅಧಿಕಾರಿಗಳು ಪೌಲರನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಪೊಲೀಸ್ ಇತಿಹಾಸದಲ್ಲೇ ಅತ್ಯುನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರ ಬಂಧನವಾಗಿರುವುದು ನಿಜಕ್ಕೂ ದುರ್ದೈವದ ಸಂಗತಿ.
ತಲಾ 30 ಲಕ್ಷ ರೂಪಾಯಿಗಳನ್ನು ಅಭ್ಯರ್ಥಿಗಳಿಂದ ವಸೂಲಿ ಮಾಡಲಾಗಿತ್ತು ಎಂಬ ಮಾಹಿತಿ ಕೂಡಾ ಹೊರಬಿದ್ದಿದೆ.
ಒ ಆರ್ ಎಂ ಶೀಟ್ ಗಳನ್ನು ಪೌಲ್ ಕಚೇರಿಯಲ್ಲೇ ತಿದ್ದಿದ ಆರೋಪವೂ ಪೌಲ್ ಅವರ ಮೇಲಿದೆ.
ಮೊದಲಿಗೆ ಅಮೃತ್ ಪೌಲ್ ರನ್ನು ಒಂದನೇ ಎಸಿಎಂಎಂ ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನಂತರ ಪೊಲೀಸ್ ಕಸ್ಟಡಿಗೆ ಪಡೆಯಲಾಯಿತು.
ಪೌಲ್ ಮೇಲೆ ಬಹಳಷ್ಟು ಗಂಭೀರ ಆರೋಪಗಳು ಇರುವುದರಿಂದ ನಾಲ್ಕು ಬಾರಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.ಆದರೆ ಅವರು ಹಾಜರಾಗಿರಲಿಲ್ಲ.ಕಡೆಗೆ ಸೋಮವಾರ ವಿಚಾರಣೆಗೆ ಬಂದ ಕೂಡಲೇ ಅವರನ್ನು ವಶಕ್ಕೆ ಪಡೆಯಲಾಯಿತು.

