ಪ್ರಧಾನಿ ಹತ್ಯೆಗೆ ಸಂಚು: ನಿವೃತ್ತ ಪೊಲೀಸ್ ಅಧಿಕಾರಿ, ಉಗ್ರರ ಬಂಧನ

ಪಾಟ್ನಾ : ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ.

ಮುಂದಿನ 25 ವರ್ಷದಲ್ಲಿ ಭಾರತವನ್ನು ಇಸ್ಲಾಂ ರಾಷ್ಟ್ರವನ್ನಾಗಿಸುವ ಗುರಿಯೊಂದಿಗೆ ಕಾರ್ಯಾಚರಣೆ ಮಾಡುತ್ತಿದ್ದ ಮೂಲಭೂತವಾದಿಗಳ ಗುಂಪನ್ನು  ಪೊಲೀಸರು ಭೇದಿಸಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾದ ನಾಯಟೋಲ ಭಾಗದ ಫುಲ್ವಾರಿ ಶರಿಫ್ ಪ್ರದೇಶದ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.

ಗುಪ್ತದಳದ ಅಧಿಕಾರಿಗಳು ಹಲವು ದಿನಗಳಿಂದ ನಿಗಾ ವಹಿಸಿ ಉಗ್ರರ ಗುಂಪು ಅಸ್ತಿತ್ವದಲ್ಲಿರುವ ಬಗ್ಗೆ ಮಾಹಿತಿ ನೀಡಿತ್ತು.

ಅದನ್ನು ಆಧರಿಸಿ ಸ್ಥಳೀಯ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಜುಲೈ11 ರಂದು ದಾಳಿ ನಡೆಸಿದ್ದವು.

ಸ್ಥಳ ಪರಿಶೀಲನೆ ವೇಳೆ 2047 ರ ವೇಳೆಗೆ ಭಾರತ ಇಸ್ಲಾಮಿಕ್ ಆಡಳಿತಕ್ಕೆ ಒಳಪಡಲಿದೆ ಎಂಬ ಪಿಟಿಪಿ ದಾಖಲೆಗಳು ಪತ್ತೆಯಾಗಿವೆ.

ಜೊತೆಗೆ ಕೆಲವು ಆಕ್ಷೇಪಾರ್ಹ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ . ಪಿಎಫ್‌ಐ ಸಂಘಟನೆಗೆ ಸೇರಿದ 25 ಕರಪತ್ರಗಳು ದೊರೆತಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ಜು12 ರಂದು ಬಿಹಾರಕ್ಕೆ ಭೇಟಿ ನೀಡುವ ವೇಳೆ ಅವರನ್ನು ಹತ್ಯೆ ಮಾಡಲು ಈ ಗುಂಪು ಸಂಚು ರೂಪಿಸಿತ್ತು.

ಪ್ರಧಾನಿ ಭೇಟಿ ವೇಳೆ ಹತ್ಯಾಕಾಂಡ ನಡೆಸಲು ಫುಲ್ವಾರಿ ಶರಿಫ್‌ನಲ್ಲಿ ಈ ಉಗ್ರರಿಗೆ 15 ದಿನ ತರಬೇತಿ ನೀಡಲಾಗಿತ್ತು.

ಜುಲೈ 6 ಮತ್ತು 7 ರಂದು ಸಭೆ ನಡೆಸಿ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರ ಪೈಕಿ ಮೊಹಮ್ಮದ್ ಜಲಾಲುದ್ದೀನ್ ಜಾರ್ಖಾಂಡ್‌ನ ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು , ನಿಷೇಧಿತ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ ( ಸಿಮಿ ) ಕಾರ್ಯಕರ್ತನಾಗಿ ಕೆಲಸ ಮಾಡಿದ್ದ ಎಂದು ತಿಳಿದುಬಂದಿದೆ.

ಮತ್ತೊಬ್ಬ ಆರೋಪಿ ಅತ್ತಾರ್ ಪರ್ವೇಜ್ ಪಿಎಫ್‌ಐ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಮುಖ್ಯಾಕಾರ ಮನೀಶ್ ಕುಮಾರ್ ತಿಳಿಸಿದ್ದಾರೆ.

ಫುಲ್ವಾರಿ ಶರೀಫ್‌ನಲ್ಲಿ ಆರೋಪಿಗಳು ಯುವಕರಿಗೆ ಖಡ್ಗ , ಚಾಕುಗಳ ಬಳಕೆ ತರಬೇತಿ ನೀಡುತ್ತಿದ್ದರು.

ತರಬೇತಿ ಪಡೆದವರನ್ನು ಬಳಸಿಕೊಂಡು ಪಾಟ್ನಾ ಸೇರಿದಂತೆ ಇತರೆಡೆಗಳಲ್ಲಿ ಕೋಮು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದರು.

ಈ ಕೇಂದ್ರಕ್ಕೆ ಕೇರಳ, ಪಶ್ಚಿಮ ಬಂಗಾಳ , ಉತ್ತರ ಪ್ರದೇಶ , ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಂದ ಯುವಕರು ಆಗಮಿಸಿ ತರಬೇತಿ ಪಡೆದಿದ್ದರು ಎಂದು ಗೊತ್ತಾಗಿದೆ.