ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿ ದೂರು ಪುಸ್ತುಕ ಇಡಲು ಸೂಚನೆ -ಸಚಿವ ಡಾ.ಕೆ. ಸುಧಾಕರ್

ಕೋಲಾರ: ರಾಜ್ಯದ ಎಲ್ಲ ಆಸ್ಪತ್ರೆಗಳಲ್ಲಿಯೂ ದೂರು ಪುಸ್ತಕ ಇಟ್ಟು, ರೋಗಿಗಳಿಂದ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ಪಡೆಯುವ ಕ್ರಮ ಜಾರಿಗೆ ತರುವುದಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
 
ನಗರದ ಎಸ್ ಎನ್ ಆರ್ ಆಸ್ಪತ್ರೆಗೆ ಭಾನುವಾರ ದಿಢೀರ್ ಭೇಟಿ ನೀಡಿ ರೋಗಿಗಳನ್ನು ಭೇಟಿಯಾಗಿ ಚಿಕಿತ್ಸೆಯ ಬಗ್ಗೆ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿದ್ದು, ಇಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
 
ಆಸ್ಪತ್ರೆಯಲ್ಲಿ ರೋಗಿಗಳನ್ನು ಭೇಟಿಯಾಗಿ ಚಿಕಿತ್ಸೆಯ ಬಗ್ಗೆ ವಿಚಾರಿಸಿದ ಸಚಿವರಿಗೆ ಸಮಾಧಾನದ ಉತ್ತರ ದೊರೆತಿದ್ದು, ಹಲವು ಪರೀಕ್ಷೆಗಳನ್ನು ಹೊರಗೆ ಬರೆದುಕೊಟ್ಟಿರುವ ಬಗ್ಗೆ ಕೆಲವರು ದೂರು ಸಲ್ಲಿಸಿದರು.
 
ಜಿಲ್ಲಾಸ್ಪತ್ರೆಗಳಲ್ಲಿ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಹೊರಗೆ ಪರೀಕ್ಷೆಗೆ ಬರೆದುಕೊಟ್ಟಿರುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವುದಾಗಿ ಸಚಿವರು ಹೇಳಿದರು.
 
 ರಕ್ಷಣಾ ಸಿಬ್ಬಂದಿ ನೇಮಕಕ್ಕೆ ಸೂಚನೆ : ಆಸ್ಪತ್ರೆಯ ಪ್ರಯೋಗಾಲಯಗಳು ಸೇರಿದಂತೆ ಇತರೆ ಅಗತ್ಯ ಕಡೆಗಳಲ್ಲಿ ರಕ್ಷಣಾ ಸಿಬ್ಬಂದಿ ಕೊರತೆ ಇರುವ ಬಗ್ಗೆ ಮಾಹಿತಿ ಪಡೆದ ಸಚಿವರು, ಕೂಡಲೇ 10 ಮಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವಂತೆ ಆದೇಶ ನೀಡಿದರು.
 
ಇಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಜನರ ಮೇಲೆ ಅನುಕಂಪ, ವಿಶ್ವಾಸವಿಟ್ಟು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
 
ಸರ್ಕಾರಿ ಆಸ್ಪತ್ರೆಗಳಿಗೆ ಬಡವರೇ ಬರಲಿದ್ದು, ಇವರ ಬಗ್ಗೆ ಅನುಕಂಪ ಇರಬೇಕು. ಆರೋಗ್ಯ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಹಾಗಾಗಿ ಆಸ್ಪತ್ರೆಗೆ ಬರುವ ಎಲ್ಲರಿಗೂ ಉಚಿತ ಮತ್ತು ಅಗತ್ಯ ಚಿಕಿತ್ಸೆ ನೀಡಲು ವೈದ್ಯರು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಬೇಕು ಎಂದರು.
 
 ಸಿಜೇರಿಯನ್ ಕಡಿಮೆಯಾಗಬೇಕು : ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶನದಂತೆ ಗರಿಷ್ಠ ಶೇ.15ರಷ್ಟು ಹೆರಿಗೆಗಳು ಮಾತ್ರ ಸಿಜೇರಿಯನ್ ಆಗಬೇಕು. ಆದರೆ ಇಲ್ಲಿ ಶೇ. 40ರಷ್ಟು ಸಿಜೇರಿಯನ್ ಆಗುತ್ತಿರುವ ಬಗ್ಗೆ ಮಾಹಿತಿ ಇದ್ದು, ಇದು ತುಂಬಾ ಹೆಚ್ಚಾಯಿತು. ಹಾಗಾಗಿ ಹೆರಿಗೆ ಮಾಡುವ ವೈದ್ಯರ ವೈಯಕ್ತಿಕ ವಿವರ ದಾಖಲಿಸಬೇಕು, ಅವರ ಅಭಿಪ್ರಾಯ ಸಂಗ್ರಹ ಮಾಡಬೇಕು ಆ ಮೂಲಕ ಸೇವೆ ಇನ್ನಷ್ಟು ಹತ್ತಿರ ಮಾಡಬೇಕು ಎಂದು ಸಲಹೆ ನೀಡಿದರು.
 
ವೈದ್ಯರನ್ನು ದೇವರ ಸಮಾನವಾಗಿ ಕಾಣಲಾಗುತ್ತದೆ, ಅಂತಹ ವೈದ್ಯರೇ ತಪ್ಪು ಮಾಡಿದರೆ ಸಮಾಜ ಕ್ಷಮಿಸಲ್ಲ ಅದು ವೃತ್ತಿಗೆ ಅಪಮಾನ ಮಾಡಿದಂತೆ. ಸಂಬಂಧಿಸಿದ ಜಿಲ್ಲಾಕಾರಿಗಳಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆ ಮಾರುಕಟ್ಟೆಯಾಗಬಾರದು.ಮಾರುಕಟ್ಟೆ ಬೇರೆ ಇದೆ ಎಂದು ಖಡಕ್ ಸೂಚನೆ ನೀಡಿದರು.
 
ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳು ಬಡವರೇ ಆಗಿರುವುದರಿಂದ ಅವರಿಗೆ ಬರೆಯುವ ಔಷಧ ಜನರಿಕ್ ಆಗಿರುವಂತೆ ನೋಡಿಕೊಳ್ಳಿ. ವಾಣಿಜ್ಯ ಮೂಲದ ಔಷಧಗಳನ್ನು ಬರೆಯುವುದನ್ನು ವೈದ್ಯರು ಕಡಿಮೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
 
 ಪತ್ರಕರ್ತರ ಮೇಲಿನ ಹಲ್ಲೆಗೆ ಖಂಡನೆ: ಶಾಸಕ ರಮೇಶ್ ಕುಮಾರ್ ಅವರು ಇತ್ತೀಚಿಗೆ ಪತ್ರಕರ್ತರ ಮೇಲೆ ನಡೆಸಿರುವ ಹಲ್ಲೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದಕ್ಕಿಂತ ಅಮಾನುಷ ಮತ್ತೊಂದಿಲ್ಲ ಎಂದರು.
 
ಎರಡು ಬಾರಿ ಸಭಾಧ್ಯಕ್ಷರಾದವರು ತಮ್ಮದೇ ಜಿಲ್ಲೆಯಲ್ಲಿ ಇಂತಹ ಘಟನೆಗೆ ಕಾರಣರಾಗಬಾರದಿತ್ತು. ಇದು ಅವರ ರಾಕ್ಷಸ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ರಾಕ್ಷಸ ವ್ಯಕ್ತಿತ್ವದ ಮುಖವಾಡ ಮುಚ್ಚಿಕೊಳ್ಳುವ ಯತ್ನ ಮಾಡಿದರೂ ಅದು ನಡೆಯಲ್ಲ. ಮೂಲತಃ ಉತ್ತಮ ಬುದ್ಧಿ ಇದ್ದರೆ ಇಂತಹ ವಕ್ರ ಬುದ್ಧಿ ಬರಲು ಸಾಧ್ಯವಿಲ್ಲ, ಹುಟ್ಟಗುಣ ಸುಟ್ಟರೂ ಹೋಗಲ್ಲ ಎಂಬುದು ಅವರಿಗೆ ಸೂಕ್ತವಾಗಿದೆ ಎಂದು ಅವರ ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
 
ಸಮಾಜದಲ್ಲಿ ಕೋಮುವಾದ, ಧರ್ಮದ ಹೆಸರಿನಲ್ಲಿ ಕೊಲೆ ಆಗುವುದು ಮಾನವೀಯತೆಗೆ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದುದು ಎಂದು ಸಚಿವರು ಹೇಳಿದರು. 
 
ಈ ಕುರಿತು ಮುಖ್ಯಮಂತ್ರಿಗಳು ದೃಢವಾಗಿ ಕ್ರಮ ಕೈಗೊಂಡಿದ್ದಾರೆ. ಪ್ರವೀಣ್ ಕೊಲೆಗೆ ಸಂಬಂಧಿಸಿ 24 ಗಂಟೆಯಲ್ಲಿ ಶಂಕಿತರನ್ನು ಬಂಧಿಸಲಾಗಿದೆ. ಅದೇ ರೀತಿಯಲ್ಲಿ ಫಾಸಿಲ್ ಕೊಲೆಗೆ ಸಂಬಂಧಿಸಿ 48 ಗಂಟೆಗಳಲ್ಲಿ ಶಂಕಿತರ ಬಂಧನವಾಗಿದೆ. ಯಾರನ್ನೂ ಧರ್ಮದ ಹೆಸರಿನಲ್ಲಿ ವಿಭಜಿಸುತ್ತಿಲ್ಲ. ಇದು ವಿರೋಧಪಕ್ಷಗಳ ತಪ್ಪು ಮಾಹಿತಿ ಎಂದು ಸಚಿವರು ಹೇಳಿದರು.
 
ಭಯೋತ್ಪಾದನೆಯನ್ನು ಒಂದೇ ಅಳತೆಗೋಲಿನಲ್ಲಿ ನೋಡಲಾಗುತ್ತಿದೆ. ಕೋಮುಗಲುಭೆ ಸೃಷ್ಟಿಸುವುದು, ಧರ್ಮದ ಹೆಸರಿನಲ್ಲಿ ಕೊಲೆ ಮಾಡುವುದನ್ನು ನಿಯಂತ್ರಿಸಲು ವಿಶೇಷ ಕಮಾಂಡೋ ಪಡೆ ರಚಿಸಲಾಗುತ್ತಿದೆ. ಸರ್ಕಾರ ಗಂಭೀರವಾಗಿದೆ, ಮಂಗಳೂರು ಮಾತ್ರವಲ್ಲ, ರಾಜ್ಯದಲ್ಲಿ ಎಲ್ಲಿಯೂ ಇಂತಹ ಘಟನೆಗಳು ಆಗಬಾರದು. ಇಂತಹ ಘಟನೆಗಳು ದಕ್ಷಿಣ ಕನ್ನಡದಲ್ಲಿ ಇದೇ ಮೊದಲಲ್ಲ. 2013ರಿಂದ ಆಗುತ್ತಿದೆ. ಆಗಿನ ಸರ್ಕಾರದ ಅವಧಿಯಲ್ಲಿ 350ಕ್ಕೂ ಹೆಚ್ಚು ಕೋಮು ಗಲುಭೆಗಳಾಗಿವೆ. ಆಗಿನ ಗೃಹಸಚಿವ ರಾಮಲಿಂಗಾರೆಡ್ಡಿ ಅವರೇ ಮಾಹಿತಿ ನೀಡಿದಂತೆ 18 ಜನರ ಸಾವು ಧಾರ್ಮಿಕ ಕಲಹಗಳಿಂದ ಆಗಿರುವುದಾಗಿ  ಹೇಳಿದ್ದಾರೆ ಎಂದು ವಿವರಿಸಿದರು.