ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯಲಿವೆ ಅಪ್ಪು- ರಾಷ್ಟ್ರಪತಿಭವನ

ಮೈಸೂರು: ಈ ಬಾರಿಯ ದಸರಾಫಲ,ಪುಷ್ಪ ಪ್ರದರ್ಶನಕ್ಕೆ ನಗರದ ಕುಪ್ಪಣ್ಣ ಪಾರ್ಕ್ ಸಜ್ಜಾಗಿದ್ದು ನಟ ಅಪ್ಪು ಹಾಗೂ ರಾಷ್ಟ್ರಪತಿ ಭವನ ವಿಶೇಷ ‌ಆಕರ್ಷಣೆಯಾಗಿವೆ.

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಈ ಸಾಲಿನ ದಸರಾ ಫಲಪುಷ್ಪ ಪ್ರದರ್ಶನವನ್ನು ನಿಶಾದ್ ಭಾಗ್ ಕುಪ್ಪಣ್ಣ ಪಾರ್ಕ್ ನಲ್ಲಿ ಸೆ.26ರಿಂದ ಅ.5ರವರೆಗೆ ಆಯೋಜಿಸಲಾಗಿದೆ.

ಕುಪ್ಪಣ್ಣ ಪಾರ್ಕ್ ನಲ್ಲಿ ಶನಿವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಈ ಬಾರಿ ಅದ್ಧೂರಿಯಾಗಿ ಫಲ, ಪುಷ್ಪ ಪ್ರದರ್ಶನ ಏರ್ಪಾಡು ಮಾಡಲಾಗಿದೆ ಎಂದು ಹೇಳಿದರು.

ರಾಷ್ಟ್ರಪತಿ ಭವನವನ್ನು ಕೆಂಪು, ಬಿಳಿ ಗುಲಾಬಿ ಹಾಗೂ ಸೇವಂತಿ ಹೂಗಳಿಂದ ಸುಮಾರು 20 ಅಡಿ ಎತ್ತರದಲ್ಲಿ ಗಾಜಿನ ಮನೆಯಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ದಿ.ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಈ ಬಾರಿ ಅಪ್ಪುಅವರ ಸಾಧನೆಯ ವಿವರದೊಂದಿಗೆ ಪುತ್ಥಳಿಗಳನ್ನು ಸ್ಥಾಪಿಸಿ ಹೂವಿನೊಂದಿಗೆ ಅಲಂಕರಿಸಲಾಗುವುದು.

ಮೈಸೂರು ರಾಜರು ತಮ್ಮ ಆಳ್ವಿಕೆಯ ಸಮಯದಲ್ಲಿ ಜನರು ವಿಶ್ರಾಂತಿ ಪಡೆಯಲು ತಂಡೀ ಸಡಕ್ ನ್ನು ನಿರ್ಮಿಸುತ್ತಿದ್ದರು. ಅದರ ಪ್ರತಿರೂಪವನ್ನು ಗಾಜಿನ ಮನೆಯ ಮುಂದೆ ನಿರ್ಮಿಸಲಾಗುತ್ತದೆ ಎಂದು ಹೇಳಿದರು.

7ಅಡಿ ಜೇನುಹುಳು, 12ಅಡಿ ಜಿರಾಫೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಹಲವು ಗೊಂಬೆಗಳನ್ನು ಹೂವಿನಿಂದ ಅಲಂಕರಿಸಲಾಗುವುದು.

7ಅಡಿ ದಪ್ಪ ಮೆಣಸಿನ ಕಾಯಿಯಿಂದ ಒಂದು ಮನೆಯನ್ನು ನಿರ್ಮಿಸಲಾಗುವುದು,ಇತರ ವೈವಿಧ್ಯಮಯದಿಂದ ಕೂಡಿದ ಕಾನ್ಸೆಪ್ಟ್ ಗಳನ್ನು ನಿರ್ಮಿಸಲಾಗುವುದು.

ಡೈರಿ ಡೇ, ಉಲ್ಲಾಸ್ ಅಗರ್ ಬತ್ತೀಸ್, ಸುವರ್ಣ ಚಾನೆಲ್ ಪ್ರಾಯೋಜಕತ್ವ ವಹಿಸಿದ್ದು, ಸಂಜೆಯ ವೇಳೆ ಅನೇಕ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಇಲಾಖೆಯಿಂದ 50ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಬೆಳೆದಿದ್ದು ಇಡೀ ಕುಪ್ಪಣ್ಣ ಪಾರ್ಕ್ ಅನ್ನು ಹೂವುಗಳಿಂದ ಅಲಂಕರಿಸಲಾಗುವುದು.

ಅವುಗಳಲ್ಲಿ ಮುಖ್ಯವಾಗಿ ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ, ಡಾಲಿಯಾ ಸೇರಿದಂತೆ ಹಲವು ಪ್ರಭೇದದ ಹೂವಿನ ಗಿಡಗಳು, ಪುಣೆಯಿಂದ ವಿಶೇಷ ಅಲಂಕಾರಿಕ ಗಿಡಗಳನ್ನು ತರಲಾಗುತ್ತಿದೆ ಎಂದು ತಿಳಿಸಿದರು.

ಅಲ್ಲದೆ ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಸಾವಯವ ಮಳಿಗೆಗಳು, ಕೃಷಿಗೆ ಸಂಬಂಧಿಸಿದ ಮಳಿಗೆಗಳು ಐಐಹೆಚ್ ಆರ್, ಸಿಡಿಬಿ, ಎನ್ ಹೆಚ್ ಬಿ, ಸಿಎಫ್ ಟಿಆರ್ ಐ ಸಂಸ್ಥೆಗಳಿಗೆ ಪತ್ರ ಬರೆದಿದ್ದು ರೈತರಿಗೆ ದೊರಕುವ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.

ಫಲ-ಪುಷ್ಪ ಪ್ರದರ್ಶನಕ್ಕೆ ಟಿಕೆಟ್ ಕೊಡಲಾಗುತ್ತದೆ.ವಯಸ್ಕರಿಗೆ 30 ಹಾಗೂ ಮಕ್ಕಳಿಗೆ 20ರೂ ನಿಗದಿಪಡಿಸಲಾಗಿದೆ ಎಂದು ಪೂರ್ಣಿಮಾ ತಿಳಿಸಿದರು.

ಇದೇ ವೇಳೆ ‌ಪ್ರದರ್ಶನಕ್ಕೆ ಸಂಬಂದಿಸಿದ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ದಸರಾ ಉಪಸಮಿತಿ,  ಫಲಪುಷ್ಪ ಪ್ರದರ್ಶನ ಸಮಿತಿಯ ಅಧ್ಯಕ್ಷ ಎಸ್.ಆರ್.ನಂಜಪ್ಪ, ಉಪಾಧ್ಯಕ್ಷರಾದ ಓಂ ಶ್ರೀನಿವಾಸ, ಸುಶೀಲಾ ಮತ್ತಿತರು ಉಪಸ್ಥಿತರಿದ್ದರು.