ಮೈಸೂರು: ವರುಣಾ ಕ್ಷೇತ್ರದಲ್ಲಿ ಅಪ್ಪ-ಮಗ 15 ವರ್ಷಗಳ ಕಾಲ ಆಡಳಿತ ನಡೆಸಿದರೂ, ಆ ಕ್ಷೇತ್ರಕ್ಕೆ ವ್ಯಕ್ತಿತ್ವವೇ ಇಲ್ಲದಂತೆ ಅಬ್ಬೆಪೇರಿ ಮಾಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಈ ಬಾರಿಯ ವಿಧಾನ ಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಮನೆಗೆ ಕಳುಹಿಸುವ ಮೂಲಕ ಅಲ್ಲಿ ಬಿಜೆಪಿ ಭಾವುಟ ಹಾರಿಸಬೇಕು ಎಂದು ಹೇಳಿದರು.
ಶುಕ್ರವಾರ ನಗರದ ಖಾಸಗಿ ಹೋಟೆಲ್ ನಲ್ಲಿ ಕರ್ನಾಟಕ ಬಿಜೆಪಿ ಡಿಜಿಟಲ್ ಮಾಧ್ಯಮ ಪ್ರಕೋಷ್ಟದಿಂದ ಆಯೋಜಿಸಲಾಗಿದ್ದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ವರುಣಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಈ ಕ್ಷೇತ್ರವನ್ನು ತಾಲೂಕು ಕೇಂದ್ರ ಮಾಡಿ, ಅಭಿವೃದ್ಧಿ ಯ ರೂಪರೇಷೆ ಮಾಡುತ್ತೇವೆ ಎಂದು ಹೇಳಿದರು.
ವರುಣಾಗೂ ಸೋಮಣ್ಣಗೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಬಾದಾಮಿಗೂ ಸಿದ್ದರಾಮಯ್ಯ ರಿಗೂ ಏನು ಸಂಬಂಧ, ಕೇರಳದ ವೈನಾಡಿಗೂ ರಾಹುಲ್ ಗಾಂಧಿಗೂ ಏನು ಸಂಬಂಧ, ಇಂದಿರಾಗಾಂಧಿಗೂ ಚಿಕ್ಕಮಗಳೂರಿಗೂ ಏನು ಸಂಬಂಧ, ಬಳ್ಳಾರಿಗೂ ಸೋನಿಯಾಗಾಂಧಿಗೂ ಏನು ಸಂಬಂಧ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಜಾತಿವಾದಿಗಳು ಅವರನ್ನು ಈ ಚುನಾವಣೆಯಲ್ಲಿ ಮಟ್ಟ ಹಾಕಬೇಕು ಎಂದು ಹೇಳಿದರು.
ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರಿಗೆ ಈ ರಾಜ್ಯದ ಅಭಿವೃದ್ದಿಯ ಬಗ್ಗೆ ಯಾವುದೇ ದೂರದೃಷ್ಠಿಯಿಲ್ಲ, ಅಭಿವೃದ್ಧಿಯ ಯಾವುದೇ ಆಲೋಚನೆಗಳಿಲ್ಲ. ವಿಷನ್ ಇಲ್ಲ. ಹಾಗಾಗಿಯೇ ತಿಂಗಳಿಗೆ 10 ಕೆ.ಜಿ ಅಕ್ಕಿ ಕೊಡ್ತೀವಿ, ಮಹಿಳೆಯರಿಗೆ 2 ಸಾವಿರ ರೂ ನೀಡ್ತೀವಿ, 200 ಯೂನೀಟ್ ವಿದ್ಯುತ್ ಪುಕ್ಕಟ್ಟೆಯಾಗಿ ನೀಡ್ತೀವಿ ಎಂದು ಹೇಳುತ್ತಿದ್ದಾರೆ.
ಇದಕ್ಕೆಲ್ಲಾ ಅವರ ಮನೆಯಿಂದ ಇಲ್ಲವೇ ಕಾಂಗ್ರೆಸ್ ನಾಯಕರ ಮನೆಗಳಿಂದ ಹಣವನ್ನು ತಂದು ಜನರಿಗೆ ನೀಡುವುದಿಲ್ಲ. ಸಿದ್ದರಾಮಯ್ಯನವರೇ ಅವರ ಊರಾದ ಸಿದ್ದರಾಮಯ್ಯನಹುಂಡಿಯಲ್ಲಿರುವ ಗದ್ದೆಯಲ್ಲಿ ಅಕ್ಕಿಯನ್ನು ಬೆಳೆದು ತಂದು ಜನರಿಗೆ ಉಚಿತವಾಗಿ ನೀಡುವುದಿಲ್ಲ ಎಂದರು.
ಸಮ್ಮೇಳನದಲ್ಲಿ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಡಿಜಿಟಲ್ ಮಾಧ್ಯಮ ಪ್ರಕೋಷ್ಠದ ಸಂಚಾಲಕ ವಿಕಾಸ್ ಪುತ್ತೂರು, ಮಂಡ್ಯ ಸಂಚಾಲಕ ನಂದೀಶ್, ಮೈಸೂರು ಜಿಲ್ಲಾ ಸಂಚಾಲಕ ವಿನೋಭಾ, ಗ್ರಾಮಾಂತರ ಸಂಚಾಲಕ ಶರತ್ ಪುಟ್ಟ ಬುದ್ದಿ, ವಿಧಾನಪರಿಷತ್ ಸದಸ್ಯ ತುಳಸಿ ಮುನಿರಾಜೇಗೌಡ, ಮೈಸೂರು ನಗರ ವಕ್ತಾರ ಡಾ.ಕೆ.ವಸಂತ್ಕುಮಾರ್, ಮೈಸೂರು ವಿಭಾಗ ಮಾಧ್ಯಮ ಸಂಯೋಜಕ ನಾಗೇಶ್, ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಮಂಗಳ ಸೋಮಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.

