ಮೈಸೂರು: ನಾನು ಈ ಹಿಂದೆ ಸಚಿವನಾಗಿದ್ದಾಗಲೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದೆ ಆದರೆ ಪ್ರಚಾರ ಪಡೆಯಲಿಲ್ಲ,ದುರದೃಷ್ಟವಶಾತ್ ಕಾಂಗ್ರೆಸ್ಸಿಗರು ನನ್ನ ಕೆಲಸದ ಪ್ರಚಾರ ಮಾಡಲಿಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಮಾಧ್ಯಮ ಸಂವಾದದಲ್ಲಿ ಅವರು ಹಳೆಯದನ್ನೆಲ್ಲಾ ನೆನಪು ಮಾಡಿಕೊಂಡರು.
ನಾನು ಯಾವತ್ತೂ ಟಿಕೆಟ್ ಕೇಳಿಲ್ಲ, ನನ್ನ ಹೋರಾಟ ನೋಡಿ ಕಾಂಗ್ರೆಸ್ ನಾಯಕರು ಟಿಕೆಟ್ ನೀಡಿದ್ದಾರೆ, ನಾನು ತೆರೆದ ಪುಸ್ತಕ ಇದ್ದಂತೆ ಯಾರು ಬೇಕಾದರೂ ನೋಡಬಹುದು ಎಂದು ತಿಳಿಸಿದರು.
ನನ್ನ ಅವಧಿಯಲ್ಲಿ ಎಲ್ಲವನ್ನೂ ಕ್ರೋಡೀಕರಿಸಿ ಉತ್ತಮ ದಸರಾ ಮಾಡಿದ್ದೇನೆ ನಿಜವಾದ ವೈಚಾರಿಕತೆ ಹಾಗೂ ಸಾಂವಿಧಾನಿಕ ದಸರಾ ಆಚರಣೆ ಮಾಡಿದ್ದೇನೆ ಎಂದು ಮಹದೇವಪ್ಪ ಹೇಳಿದರು.
ಅಕ್ಕಿ ಪೂರೈಸುವ ವಿಚಾರದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ, ಹೆಚ್ಚುವರಿ ಅಕ್ಕಿ ಕೇಳಿದರೆ ಚುನಾವಣೆಗೂ ಮುನ್ನ ನಮ್ಮನ್ನು ಕೇಳಿದ್ರಾ ಅಂತಾರೆ ಎಂದು ಇದೇ ವೇಳೆ ಸಚಿವರು ದೂರಿದರು.
ಪ್ರಣಾಳಿಕೆ ಬಗ್ಗೆ ಇನ್ನೊಂದು ಪಕ್ಷದ ಜೊತೆ ಚರ್ಚಿಸುವುದು ಸರೀನಾ ಅದು ಸಾಧ್ಯಾನಾ ಎಂದು ಹೆಚ್.ಸಿ ಮಹದೇವಪ್ಪ ಪ್ರತಿಪಕ್ಷದವರ ಹೇಳಿಕೆಗೆ ತಿರುಗೇಟು ನೀಡಿದರು.
ಸಂವಿಧಾನಕ್ಕೆ ತಿದ್ದುಪಡಿಗೆ ಅವಕಾಶವಿದೆ. ಆದರೆ ಸಂವಿಧಾನವನ್ನು ತಿರುಚಲು ಎಂದಿಗೂ ಅವಕಾಶವಿಲ್ಲ ಎಂದು ಹೇಳಿದರು.
ಆಶ್ವಾಸನೆಗಳು ಸಂವಿಧಾನದ ಕಾನೂನುಗಳಲ್ಲ. ಪಠ್ಯ ಪರಿಷ್ಕರಿಸಿದ ವೇಳೆ ಅನಗತ್ಯ ವಿಚಾರ ಹಾಕಿದರೆ ಅದನ್ನು ಅಭ್ಯಸಿಸುವ ಯುವ ಸಮೂಹ ದಾರಿ ತಪ್ಪಲಿದೆ ಎಂದು ಅವರು ತಿಳಿಸಿದರು.
ಬಲವಂತದ ಮತಾಂತರಕ್ಕೆ ಸಂವಿಧಾನದಲ್ಲೂ ಅವಕಾಶವಿಲ್ಲ. ಆದರೆ ಸ್ವಯಂ ಪ್ರೇರಿತ ಮತಾಂತರ ಎಲ್ಲರೂ ಹಕ್ಕು ಎಂದು ಸುಪ್ರೀಂಕೋರ್ಟೇ ಅಭಿಪ್ರಾಯಪಟ್ಟಿದಿಯಲ್ಲಾ ಎಂದು ಹೇಳಿದರು.
ಜಾತಿ, ಧರ್ಮದ ಹೆಸರಲ್ಲಿ ಗೊಂದಲ ಮೂಡಿಸುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಡಾ.ಎಚ್.ಸಿ.ಮಹದೇವಪ್ಪ ಉತ್ತರಿಸಿದರು.