ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ
ಐದು ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.
ಶಂಕಿತರ ಬಂಧನ ಸುದ್ದಿ ಹರಡುತ್ತಿದ್ದಂತೆ ನಗರದ ಜನತೆ ಆತಂಕಕ್ಕೀಡಾಗಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರು ಶಂಕಿತರ ನೆಲೆವೀಡಾಗುತ್ತಿದೆಯೆ ಎಂಬ ಆತಂಕ ಮನೆಮಾಡಿದೆ.
ಉಗ್ರರ ಜೊತೆ ಸಂಪರ್ಕ ಸಾಧಿಸಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದ ಐದು ಮಂದಿ ಶಂಕಿತ ಉಗ್ರರನ್ನು ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರು
ಜನರು ಆತಂಕಕ್ಕೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.
ಸುಹೇಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್ ರಬ್ಬಾನಿ ಬಂಧಿತ ಶಂಕಿತ ಉಗ್ರರು.
ಆದರೆ, ಈ ತಂಡದ ನಾಯಕ ಜುನೈದ್ ನಾಪತ್ತೆಯಾಗಿದ್ದಾನೆ,
ಶಂಕಿತ ಉಗ್ರರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದು,
ಎನ್ಐಎ ಮತ್ತು ಸಿಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಶಂಕಿತರನ್ನು ಬಂಧಿಸಿದ್ದಾರೆ ಎಂದು ಹೇಳಿದರು.
ಶಂಕಿತರ ಮೇಲೆ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ,
ಶಂಕಿತ ಉಗ್ರರನ್ನು ಆಡುಗೋಡಿಯ ಟೆಕ್ನಿಕಲ್ ಸೆಲ್ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಆರ್ಟಿ ನಗರದ ಸುಲ್ತಾಲ್ ಪಾಳ್ಯದ ಮನೆಯೊಂದರಲ್ಲಿ ಶಂಕಿತರು ವಿಧ್ವಂಸಕ ಕೃತ್ಯ ನಡೆಸಲು ಸಂಚು ನಡೆಸುತ್ತಿದ್ದಾಗ ಖಚಿತ ಮಾಹಿತಿ ಆಧರಿಸಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಶಂಕಿತರಿಂದ 12 ಮೊಬೈಲ್ ಫೋನ್ಗಳು, ಒಂದು ಡ್ರ್ಯಾಗರ್,ವಾಕಿಟಾಕಿ ಸೆಟ್ಸ್, ಎರಡು ಸ್ಯಾಟಲೈಟ್ ಫೋನ್, 7 ಕಂಟ್ರಿ ಮೇಡ್ ಪಿಸ್ತೂಲ್, 45 ಜೀವಂತ ಮದ್ದು ಗುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
2008ರಲ್ಲಿ ನಡೆದಿದ್ದ ಸೀರಿಯಲ್ ಸ್ಫೋಟ ಆರೋಪಿ ನಸೀರ್ ಸಂಚು ರೂಪಿಸಿದ್ದ. ಟಿ.ನಸೀರ್ ಹಾಗೂ ಜುನೈದ್ ಈ ಪ್ರಕರಣದ ಮಾಸ್ಟರ್ ಮೈಂಡ್ ಗಳಾಗಿದ್ದು, ಸದ್ಯ ಟಿ.ನಸೀರ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾನೆ.
ಆರೋಪಿಗಳಿಗೆ ಆನ್ಲೈನ್ ಹಾಗೂ ನಗದು ರೂಪದಲ್ಲಿ ಹಣ ಪೂರೈಕೆಯಾಗಿದೆ. ಈ ಬಗ್ಗೆ ತಿಳಿಯಲು ಐವರು ಆರೋಪಿಗಳನ್ನು 15 ದಿನ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ತಿಳಿಸಿದರು.
ಕೆಲವರು ಈ ಹಿಂದೆ ಕೊಲೆ, ದರೋಡೆ, ರಕ್ತ ಚಂದನ ಕಳವು ಮುಂತಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಸಿಬಿ ಜಾಯಿಂಟ್ ಕಮಿಷನರ್ ಡಾ.ಶರಣಪ್ಪ ಹಾಜರಿದ್ದರು.

