ಮೈಸೂರು,ಮಾ.3: ಆಕಾಶ, ಭೂಮಿ ಒಂದಾದರೂ ಸರಿ ಮಾರ್ಚ್ 22ರಂದು ಅಖಂಡ ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ರವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗಡಿಯಲ್ಲಿ ಎಂಇಎಸ್ ಕಾರ್ಯಕರ್ತರ ದೌರ್ಜನ್ಯ ಖಂಡಿಸಿದರು.
ಗಡಿ ನಾಡು, ಕನ್ನಡ ಹಾಗೂ ಕನ್ನಡಿಗರ ಶಕ್ತಿಯು ಅಖಂಡ ಕರ್ನಾಟಕವನ್ನು ಬಂದ್ ಮಾಡುವ ಮೂಲಕ ಪ್ರದರ್ಶನವಾಗಬೇಕು, ಕನ್ನಡಿಗರ ಶಕ್ತಿ ದೇಶಕ್ಕೆ ಗೊತ್ತಾಗಬೇಕು ಎಂದರೆ ಮಾ.22ರಂದು ಕರ್ನಾಟಕ ಸಂಪೂರ್ಣ ಬಂದ್ ಆಗಲೇಬೇಕು ಎಂದು ತಿಳಿಸಿದರು.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳು ಅಭಿವೃದ್ಧಿಯಾಗಬೇಕಾಗಿದೆ. ಕೇಂದ್ರ ಸರ್ಕಾರ ನಮ್ಮ ರಾಜ್ಯವನ್ನು ಕಡೆಗಣಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಎಂದೆಂದೂ ಕಂಡಿರದ ಬಂದ್ ಆಗಬೇಕು ಎಂದು ಕರೆ ನೀಡಿದರು.
ಈಗಾಗಲೇ ೧೯೦೦ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬಂದ್ಗೆ ಬೆಂಬಲ ಸೂಚಿಸಿವೆ. ಈ ಬಂದ್ ಕನ್ನಡಿಗರಿಗಾಗಿ ನಡೆಯುತ್ತಿರುವ ಬಂದ್ ಎಂದು ವಾಟಾಳ್ ಹೇಳಿದರು.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕೂಡ ಕೊನೆ ಕ್ಷಣದಲ್ಲಿ ಬೆಂಬಲ ಸೂಚಿಸುತ್ತಾರೆ. ನಾರಾಯಣಗೌಡರ ಬಗ್ಗೆ ನಮಗೆ ಗೌರವ ಇದೆ. ಅವರ ಜೊತೆಯೂ ಕೂಡ ಮಾತನಾಡುತ್ತೇವೆ. ಬಂದ್ಗೆ ಯಾರು ಕೂಡ ವಿರೋಧ ಮಾಡುವುದಿಲ್ಲ ಎಂದು ವಾಟಾಳ್ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಭಾವನೆ ಇರಬೇಕು. ವಿದ್ಯಾರ್ಥಿಗಳು ಎಲ್ಲಾ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಕರೆ ನೀಡಿದರು.