ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು, ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ಸ್ಪೆಕ್ಟರ್ ಬಿ.ಜಿ ಪ್ರಕಾಶ್ ಮತ್ತು ತನಿಖಾ ತಂಡದ ಸಿಬ್ಬಂದಿ ಮೇಲೆ ಎಫ್ಐಆರ್ ದಾಖಲಿಸಿ ಸಸ್ಪೆಂಡ್ ಮಾಡುವಂತೆ ಆಗ್ರಹಿಸಿ ಭ್ರಷ್ಟಾಚಾರ ನಿರ್ಮೂಲನ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ನಿರಪರಾಧಿ ಅಮಾಯಕ ಆದಿವಾಸಿ ಜನಾಂಗದ ಸುರೇಶ್ ಎಂಬವರನ್ನು ಬೇಕೆಂದೇ ಪ್ರಕರಣ ವೊಂದರಲ್ಲಿ ಸಿಲುಕಿಸಿ ಎರಡು ವರ್ಷ ಜೈಲುವಾಸ ಅನುಭವಿಸಲು ಬೆಟ್ಟದಪುರ ಇನ್ಸ್ಪೆಕ್ಟರ್ ಬಿ.ಜಿ ಪ್ರಕಾಶ್, ಎಎಸ್ಐ ಸೋಮಶೇಖರ್ ಸಿಬ್ಬಂದಿಗಳಾದ ಜಿತೇಂದ್ರ ಕುಮಾರ್, ಎಂ. ಪ್ರಕಾಶ್, ಮುಖೇಶ್ ಕುಮಾರ್ ಮತ್ತಿತರರು ಕಾರಣರಾಗಿದ್ದಾರೆ ಎಂದು ಪ್ರತಿಭಟನೆ ವೇಳೆ ಭ್ರಷ್ಟಾಚಾರ ನಿರ್ಮೂಲನ ಸಮಿತಿ ಸದಸ್ಯರು ಆರೋಪಿಸಿದರು.
ಈ ಅಧಿಕಾರಿಗಳು ನ್ಯಾಯಾಲಯವನ್ನು ವಂಚಿಸಿ ಪರಿಶಿಷ್ಟ ಜಾತಿ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಇವರೆಲ್ಲರ ಮೇಲೆ ಎಫ್ ಐ ಆರ್ ದಾಖಲಿಸಿ ಕರ್ತವ್ಯ ದಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.