ಮೈಸೂರು: ಬಿಬಿಎಂಪಿ ಬದಲು ನಿನ್ನೆಯಷ್ಟೆ ಗ್ರೇಟರ್ ಬೆಂಗಳೂರು ಜಾರಿಗೆ ಬಂದಿದೆ,ಶೀಘ್ರದಲ್ಲೇ ಚುನಾವಣೆ ನಡೆಸುತ್ತೇವೆ ಎಂದು ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರಿಗೆ ಶೀಘ್ರವೇ ಚುನಾವಣೆ ಮಾಡುತ್ತೇವೆ. ಕ್ಯಾಬಿನೆಟ್ ನಲ್ಲಿ ಎಲ್ಲರೂ ಒಪ್ಪಿದ್ದಾರೆ,ಶೀಘ್ರವೇ ಸಬ್ ಕಮಿಟಿ ಮಾಡುತ್ತೇವೆ ಎಂದು ಹೇಳಿದರು
ಗ್ರೇಟರ್ ಬೆಂಗಳೂರು ಅಲ್ಲ ಕ್ವಾಟರ್ ಬೆಂಗಳೂರು ಎಂಬ ಆರ್. ಅಶೋಕ್ ಟೀಕೆ ಕುರಿತು ಪ್ರತಿಕ್ರಿಯಿಸಿದ ಡಿ ಕೆ ಶಿ ಮೊದಲೇ ವಿರೋಧ ಮಾಡಬಹುದಿತ್ತು. ಆದರೆ ಅಶೋಕ್ ವಿರೋಧ ಮಾಡಲಿಲ್ಲ. ವಿಪಕ್ಷ ನಾಯಕನಾಗಿ ಅಷ್ಟು ಟೀಕೆ ಮಾಡದಿದ್ದರೆ ಹೇಗೆ, ಅವರಿಗೆ ನಾವು ಗೌರವ ಕೊಡುತ್ತೇವೆ ಎಂದು ತಿಳಿಸಿದರು.
ಅಶೋಕ್ ಅವರೇ ಗ್ರೇಟರ್ ಬೆಂಗಳೂರಿಗೆ ಸಲಹೆಗಳನ್ನು ಕೊಟ್ಟಿದ್ದಾರೆ. ಯಾಕೆ ಕೊಟ್ಟರು, ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ಆಗಿದೆ. ಇವರೆಲ್ಲರೂ ಒಪ್ಪಿದ್ದಾರೆ ಈಗ ವಿಪಕ್ಷವಾಗಿ ಟೀಕೆ ಮಾಡುತ್ತಾರೆ ಅವರ ಕೆಲಸ ಅವರು ಮಾಡಲಿ ಎಂದು ಡಿಕೆಶಿ ಟಾಂಗ್ ನೀಡಿದರು.
ರಾಮನಗರ ಹೆಸರು ಬದಲಾವಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ಅದು ಕೂಡ ಶೀಘ್ರವೇ ಆಗಲಿದೆ, ಶುಭ ಗಳಿಗೆ ಶುಭ ಮುಹೂರ್ತ ಬರುತ್ತಿದೆ ಎಂದು ಹೇಳಿದರು.
ಯುದ್ಧ ವಿಚಾರದಲ್ಲಿ ಕ್ರೆಡಿಟ್ ವಾರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿ ಕೆ ಶಿ, ಪಕ್ಷಕ್ಕಿಂತ ವ್ಯಕ್ತಿಗಿಂತ ದೇಶ ಮುಖ್ಯ ಅಂತ ಹೇಳಿದ್ದೇವೆ. ಪ್ರಧಾನಿ ಅವರ ತೀರ್ಮಾನಕ್ಕೆ ಬದ್ಧ ಅಂತ ಹೇಳಿದ್ದೇವೆ. ಎಲ್ಲಾ ಪಕ್ಷಗಳ ಮೀಟಿಂಗ್ ಕರೀರಿ ಅಂತ ಮನವಿ ಮಾಡಿದ್ದೇವೆ. ಪಾರ್ಲಿಮೆಂಟ್ ನಲ್ಲಿ ಹೇಗೆ ಕದನ ವಿರಾಮ ಆಯಿತು ಅಂತ ಹೇಳಿ ಅಂತ ಪ್ರಧಾನಿಗೆ ಮನವಿ ಮಾಡಿದ್ದೇವೆ. ಇಂದಿರಾ ಗಾಂಧಿ ಕಾಲದಿಂದ ಈ ರೀತಿ ಆಗಿರಲಿಲ್ಲ. ಹೊರಗಡೆ ದೇಶದವರು ನಮ್ಮ ದೇಶದ ವಿಷಯಕ್ಕೆ ಮೂಗು ತೂರಿಸುವುದು ಸರಿಯಲ್ಲ ಅನ್ನೋದು ಎಲ್ಲರ ಅಭಿಪ್ರಾಯ ಎಂದು ತಿಳಿಸಿದರು.
ಸಿಎಂ ಆಗಲು ಶುಭ ಗಳಿಗೆ ಬರುತ್ತಿದಿಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ತಮ್ಸಪ್ ಸಿಂಬಲ್ ತೋರಿಸಿದ ಡಿಕೆಶಿ ನಗುತ್ತಾ ಹೊರಟುಬಿಟ್ಟರು.