ಕದನ ವಿರಾಮ ಘೋಷಣೆ:ಮೋದಿ ವಿರುದ್ಧ ಎಂ ಲಕ್ಷ್ಮಣ್ ಆಕ್ಷೇಪ

ಮೈಸೂರು: ಕದನ ವಿರಾಮ ಘೋಷಣೆ ವಿಚಾರಕ್ಕೆ ಸಂಬಂದಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಡೆಗೆ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕ್ ಆಕ್ರಮಿತ ಪ್ರದೇಶ ವಶಪಡಿಸಿಕೊಳ್ಳಲು ಒಂದು ಒಳ್ಳೆಯ ಅವಕಾಶ ಇತ್ತು. ಆದರೆ ಪ್ರಧಾನ ಮೋದಿ, ಅಮೇರಿಕಾ ಅಧ್ಯಕ್ಷ ಟ್ರಂಪ್ ಮಾತು ಕೇಳಿ ಕೈಚೆಲ್ಲಿ ಕೂತರು ಎಂದು ಟೀಕಿಸಿದರು.

ಇದು ಕೇವಲ ಇಬ್ಬರಿಗೋಸ್ಕರ ಕದನ ವಿರಾಮ ಘೋಷಣೆ ಮಾಡಿರೋದು. ಅವರು ಯಾರು ಅಂದ್ರೆ ಅದಾನಿ, ಅಂಬಾನಿ. ಇವರಿಬ್ಬರ ವ್ಯಾಪಾರಕ್ಕೆ ಹೊಡೆತ ಬೀಳುತ್ತದೆ ಎಂಬ ಕಾರಣಕ್ಕೆ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದರು ಎಂದು ದೂರಿದರು.

ಸಿಕ್ಕಿದ ಚಾನ್ಸ್ ಕೈ ಚೆಲ್ಲಿ ಭಾರತೀಯ ಸೈನಿಕರಿಗೆ ಅಪಮಾನ ಮಾಡುವ ಕೆಲಸವನ್ನ ಪ್ರಧಾನಿ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಆರ್ಮಿ ಕಮಾಂಡೆಂಟ್ ಸೋಫಿಯ ಖುರೇಷಿ ಕುರಿತು ಬಿಜೆಪಿಯ ವಿಜಯ್ ಶಾ ಅವಹೇಳನಕಾರಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ಮಧ್ಯಪ್ರದೇಶದ ಸಚಿವ, ಬಿಜೆಪಿ ನಾಯಕ ವಿಜಯ್ ಶಾ ಧರ್ಮಧಾರಿತವಾಗಿ ಮಾತನಾಡಿದ್ದಾರೆ. ಸೇನೆಯಲ್ಲಿ ಜಾತಿ ಧರ್ಮ ಎಂಬುದಿಲ್ಲ. ಸೋಫಿಯ ಖುರೇಶಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಖುರೇಶಿ ಟೆರರಿಸ್ಟ್ ತಂಗಿ ಎಂದು ಕರೆದಿದ್ದಾರೆ. ಇದನ್ನು ಇಲ್ಲಿಯವರೆಗೆ ಬಿಜೆಪಿಯ ಯಾವ ನಾಯಕರು ಖಂಡನೆ ಮಾಡಲಿಲ್ಲ ಎಂದು ದೂರಿದರು.

ಇದು ಬಿಜೆಪಿ ಸರ್ಕಾರದ ಹೇಳಿಕೆಯಾಗಿದೆ. ಮುಸ್ಲಿಂ ಎಂಬ ಕಾರಣಕ್ಕೆ ಬಿಜೆಪಿ ಆರ್ ಎಸ್ ಎಸ್ ಅಳತೆ ಮಾಡುತ್ತಿದೆ. ಇದೇ ಹೇಳಿಕೆ ವಿರೋಧ ಪಕ್ಷಗಳು ಮಾತನಾಡಿದ್ದರೆ ಬೆಂಕಿ ಹೊತ್ತಿಸಿಬಿಡುತ್ತಿದ್ದರು.ಕೂಡಲೇ ಆತನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಜೈಲಿಗಟ್ಟಬೇಕು ಎಂದು ಲಕ್ಷ್ಮಣ್ ಆಗ್ರಹಿಸಿದರು.