ಸುಳ್ಳು ಪ್ರಕರಣ ದಾಖಲಿಸಿದ್ದರ ವಿರುದ್ದ ರೊಚ್ಚಿಗೆದ್ದ ಗ್ರಾಮಸ್ಥರು! ಎಸ್ಪಿ ಕಚೇರಿ ಮುತ್ತಿಗೆ ಯತ್ನ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ವೀರನಪುರ ಗ್ರಾಮ ಸಭೆಯಲ್ಲಿ ಅಶಾಂತಿ ಮೂಡಿಸಿ, ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ 17 ಮಂದಿಯ ಮೇಲೆ ಪ್ರಕರಣ ದಾಖಲಾದ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಎಲ್ಲ ಸಮುದಾಯದವರು ಎಸ್ಪಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ನಡೆದಿದೆ‌.

ಗುಂಡ್ಲುಪೇಟೆ ತಾಲ್ಲೂಕಿನ ವೀರನಪುರ ಗ್ರಾಮದ ಶಿವಕುಮಾರ್ ನೀಡಿದ ದೂರಿನನ್ವಯ ಗುಂಡ್ಲುಪೇಟೆ ಪೊಲೀಸರು ವೀರನಪುರ ಗ್ರಾಮದ 17 ಮಂದಿ ಮೇಲೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಪ್ರಕರಣ ದಾಖಲಿಸಿದ್ದರು.

ಶ್ರೀ ವೀರಭದ್ರೇಶ್ವರ ಸ್ವಾಮಿ, ಶ್ರೀ ಸಿದ್ದಪ್ಪಾಜಿ ಹಾಗೂ ಶ್ರೀ ಮಾರಮ್ಮ ದೇವಸ್ಥಾನಗಳಿಗೆ ದಲಿತರಿಗೆ ಪ್ರವೇಶ ನೀಡದೇ ಇರುವ ಬಗ್ಗೆ ಹಾಗೂ ದೇವಾಲಯಗಳ ಆಸ್ತಿಗಳ ಹರಾಜು ಹಾಕದೇ ಕೇವಲ ಒಂದು ಸಮುದಾಯದವರು ಅದನ್ನು ಉಪಯೋಗಿಸಿಕೊಳ್ಳು ತ್ತಿದ್ದಾರೆ ಎಂದು ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಗ್ರಾಮದ 17 ಮಂದಿ ಜಾತಿ ನಿಂದನೆ ಮಾಡಿ ಪ್ರಾಣ ಬೆದರಿಕೆ ಹಾಕಿ ದ್ದಾರೆ ಎಂದು ಗುಂಡ್ಲುಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಠಾಣೆಯಲ್ಲಿ ದಾಖಲಾದ ಜಾತಿ ನಿಂದನೆ ಹಾಗೂ ಪ್ರಾಣ ಬೆದರಿಕೆ ಸುಳ್ಳು ಪ್ರಕರಣ ದಾಖಲಾಗುತ್ತಿದ್ದಂತೆ ವೀರನಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಗ್ರಾಮದಲ್ಲಿ ಎಲ್ಲ ಜಾತಿಯವರು ಅನ್ಯೋನವಾಗಿದ್ದಾರೆ. ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಹಾಳುಮಾಡಲು ಕೆಲವರು ಪಿತೂರಿ ನಡೆಸಿದ್ದಾರೆ. ತನಿಖೆ ನಡೆಸಿ ಯಾರು ತಪ್ಪು ಮಾಡಿದ್ದರೆ ಅವರ ಮೇಲೆ ಕ್ರಮ ಜರುಗಿಸಿದರೆ ನಾವು ಬದ್ದ..ಒಂದು ವೇಳೆ ಸುಳ್ಳು ಪ್ರಕರಣ ದಾಖಲಿಸಿದ್ದೆ ಆದರೆ ಅವರ ಮೇಲೂ ಇಲಾಖಾವಾರು ಕ್ರಮ ಜರುಗಿಸಿ ಎಂದು ಪಟ್ಟಣ ಠಾಣಾ ಮುತ್ತಿಗೆ ಹಾಕಿ ಜನರು ಆಗ್ರಹಿಸಿದರು.

ಕೆಲ ದಲಿತ ಸಮುದಾಯದವರು , ಆರೋಪಗಳಲ್ಲಿ ಸತ್ಯಾಂಶವಿಲ್ಲ ಎಂದು ವಾದಿಸಿ, ನ್ಯಾಯ ಸಿಗದಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿ ಎಸ್ಪಿ ಕಚೇರಿ ಮುತ್ತಿಗೆ ಹಾಕಲು ಬಂದಾಗ ಕಚೇರಿ ಮುಂಭಾಗ ಪೊಲಿಸರನ್ನು ನಿಯೋಜಿಸಿ ನಂತರ ಪಟ್ಟಣ ಠಾಣೆಗೆ ಮಾರ್ಗ ಬದಲಿಸಿ, ಗ್ರಾಮಸ್ಥರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.