ರಾಜ್ಯ ಸರ್ಕಾರದಲ್ಲಿ ಇಲಾಖೆಗಳು ರಾಸಲೀಲೆ,ವಸೂಲಿ ಕೇಂದ್ರಗಳಾಗಿವೆ:ಅಶೋಕ್

ಬೆಂಗಳೂರು: ನಮ್ಮ ರಾಜ್ಯದ ಇತಿಹಾಸದಲ್ಲೇ ಇಂತಹ ನಾಚಿಕೆಗೇಡಿನ ಸ್ಥಿತಿಯನ್ನು ಕಂಡಿಲ್ಲ, ಜನರ ಜೀವ, ಆಸ್ತಿ ಮತ್ತು ಗೌರವವನ್ನು ರಕ್ಷಿಸಬೇಕಾದ ಪೊಲೀಸ್ ಇಲಾಖೆ ಸುದ್ದಿಯಾಗುತ್ತಿರುವುದು ಅಪರಾಧಿಗಳನ್ನು ಹಿಡಿದಿದ್ದ ಕ್ಕಾಗಿ ಅಲ್ಲ, ಕಾನೂನು ಮುರಿದು ನಗೆಪಾಟಲಿ ಗೀಡಾದ ಘಟನೆಗಳಿಗಾಗಿ ಎಂದು ಪ್ರತಿಪಕ್ಷ ನಾಯಕ ಅಶೋಕ್ ಟೀಕಿಸಿದ್ದಾರೆ.

ರಾಜ್ಯದ ಉನ್ನತ ಮಟ್ಟದ ಪೊಲೀಸ್ ಅಧಿಕಾರಿ ಯೊಬ್ಬರು ಕಚೇರಿಯೊಳಗೇ ಅಸಭ್ಯ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಹೊರಬಿದ್ದಿ ರುವುದು, ವಿಡಿಯೋಗಳು ವೈರಲ್ ಆಗಿರುವುದು ಕಾಂಗ್ರೆಸ್ ಸರ್ಕಾರದಲ್ಲಿ ಪೊಲೀಸ್ ಇಲಾಖೆ ನೈತಿಕವಾಗಿ ಎಷ್ಟು ಅಧಃಪತನವಾಗಿದೆ ಎನ್ನುವುದಕ್ಕೆ ಜೀವಂತ ಸಾಕ್ಷಿ ಎಂದು ಅವು ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

ಇದು ಕೇವಲ ಒಬ್ಬ ಅಧಿಕಾರಿಯ ವೈಯಕ್ತಿಕ ತಪ್ಪಲ್ಲ, ಇಡೀ ಪೊಲೀಸ್ ವ್ಯವಸ್ಥೆಯ ನೈತಿಕ ಪತನದ ನಿದರ್ಶನ.

ಗೃಹ ಸಚಿವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಧಿಕಾರಿಯೊಬ್ಬರ ವಿರುದ್ಧ ಅನೇಕ ಗಂಭೀರ ಆರೋಪಗಳಿದ್ದರೂ ಯಾವುದೇ ಕಠಿಣ ಕ್ರಮ ಇಲ್ಲದಿರುವುದು ಸರ್ಕಾರ ಈ ರೀತಿಯ ವರ್ತನೆಗೆ ಪರೋಕ್ಷ ರಕ್ಷಣೆ ನೀಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ಶಿಸ್ತಿನ ಇಲಾಖೆಯ ಗೌರವ ಸಾರ್ವಜನಿಕರ ಮುಂದೆ ಮಣ್ಣಾಗುತ್ತಿದ್ದರೂ ಸರ್ಕಾರ ಕಣ್ಣು ಮುಚ್ಚಿಕೊಂಡಿರುವುದು ಅಸಹ್ಯ ಎಂದು ಅಶೋಕ್ ಕಿಡಿಕಾರಿದ್ದಾರೆ.

ಒಂದೆಡೆ ಪೊಲೀಸ್ ಇಲಾಖೆಯೊಳಗಿನ ಅಶಿಸ್ತು ಮತ್ತು ಅನಾಚಾರ, ಮತ್ತೊಂದೆಡೆ ಅಪರಾಧಿಗಳ ರಾಜಾರೋಷ. ಪೊಲೀಸ್ ಕಮಿಷನರ್ ಕಚೇರಿಯ ಮೂಗಿನ ಕೆಳಗೇ ಹಣ ಲೂಟಿ ಆಗುತ್ತದೆ ಎಂದರೆ, ಸಾಮಾನ್ಯ ನಾಗರಿಕನ ಸುರಕ್ಷತೆಗೆ ಯಾವ ಭರವಸೆ ಉಳಿದಿದೆ ಎಂದು ಕಾರವಾಗಿ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಎಟಿಎಂ ಲೂಟಿ, ಬ್ಯಾಂಕ್ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಪತ್ತೆ ಕಾರ್ಯದಲ್ಲಿ ಇಲಾಖೆ ನಿರಂತರವಾಗಿ ವಿಫಲವಾಗುತ್ತಿದೆ. ಪೊಲೀಸರ ಗಮನ ಅಪರಾಧಿಗಳ ಮೇಲೆ ಇದೆಯೋ, ಅಥವಾ ರಾಜಕೀಯ ಒತ್ತಡ ಮತ್ತು ಕಲೆಕ್ಷನ್ ವ್ಯವಸ್ಥೆ ಮೇಲೊ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಇಂದು ಡ್ರಗ್ಸ್ ಜಾಲ ಹಳ್ಳಿಗಳವರೆಗೂ ವಿಸ್ತರಿಸಿದೆ. ಶಾಲಾ–ಕಾಲೇಜುಗಳ ಸುತ್ತ ಗಾಂಜಾ, ಮಾದಕ ವಸ್ತುಗಳ ವ್ಯಾಪಾರ ನಡೆಯುತ್ತಿದ್ದರೂ, ಇದನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ.

ರಾಜ್ಯದಲ್ಲಿ ಡ್ರಗ್ಸ್ ದಂಧೆ ಪತ್ತೆ ಹಚ್ಚಲು ಅನ್ಯರಾಜ್ಯದ ಪೊಲೀಸರು ಬರಬೇಕಾಗಿರುವುದು ನಾಚಿಕೆಗೇಡು. ಪರಿಸ್ಥಿತಿ ಹೀಗೆ ಮುಂದುವರೆದರೆ ಕರ್ನಾಟಕದ ಒಂದು ತಲೆಮಾರು ಮಾದಕ ವಸ್ತುಗಳ ನಶೆಗೆ ಬಲಿಯಾಗು ವುದು ನಿಶ್ಚಿತ ಎಂದು ಅಶೋಕ ಎಚ್ಚರಿಸಿದ್ದಾರೆ.

ಗೃಹ ಸಚಿವ ಡಾ ಜಿ.ಪರಮೇಶ್ವರ ಅವರೇ, ನಿಮ್ಮ ಇಲಾಖೆಯ ಅಧಿಕಾರಿಗಳು ಕಚೇರಿಯೊಳಗೇ ಅನಾಚಾರ ಎಸಗುತ್ತಿದ್ದರೂ ನೀವು ಮೌನವಾಗಿರುವುದು, ಇಲಾಖೆಯ ನಿಮ್ಮ ಹಿಡಿತದ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಗೃಹ ಇಲಾಖೆಯ ಮೇಲೆ ತಮಗೆ ಆಸಕ್ತಿ ನಿಯಂತ್ರಣ ಇಲ್ಲದಿದ್ದರೆ, ಆ ಕುರ್ಚಿಗೆ ಅಂಟಿಕೊಂಡು ಕುಳಿತು ಕೊಳ್ಳುವ ನೈತಿಕ ಹಕ್ಕು ನಿಮಗಿಲ್ಲ ಎಂದು ಅಶೋಕ ಚಾಟಿ‌ ಬೀಸಿದ್ದಾರೆ.

ಪೊಲೀಸ್ ಇಲಾಖೆಯನ್ನು ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಬಿ–ಟೀಮ್ ಆಗಿ ಬಳಸುತ್ತಿದೆಯೇ, ಜನಸಾಮಾನ್ಯರಿಗೆ ನ್ಯಾಯ ಸಿಗದ ಈ ವ್ಯವಸ್ಥೆಗೆ ಯಾರು ಹೊಣೆ. ಇದು ಜನಸಾಮಾನ್ಯರು ಕೇಳುತ್ತಿರುವ ಪ್ರಶ್ನೆಗಳು.

ಸಿಎಂ ಸಿದ್ದರಾಮಯ್ಯ ನವರೇ, ಗೃಹ ಇಲಾಖೆಯ ವೈಫಲ್ಯಕ್ಕೆ ನೈತಿಕ ಹೊಣೆ ಹೊತ್ತು ಅಸಮರ್ಥ ಗೃಹ ಸಚಿವರ ರಾಜೀನಾಮೆ ಪಡೆಯಿರಿ ಎಂದು ಪ್ರತಿಪಕ್ಷ ನಾಯಕರು ಆಗ್ರಹಿಸಿದ್ದಾರೆ.