ರಾಜ್ಯದ ಜನರ ಮುಂದೆ ಬೆತ್ತಲಾದ ಸರ್ಕಾರ: ಅಶೋಕ್ ಟೀಕಾಪ್ರಹಾರ

ಬೆಂಗಳೂರು: ನೂತನ‌ ಸಿಎಂ ಡಿ.ಕೆ ಶಿವಕುಮಾರ್ ಸರ್ಕಾರದ ಖಾತೆ ಹಂಚಿಕೆ ಪ್ರಹಸನ, ಕಾಂಗ್ರೆಸ್ ಪಕ್ಷದ ನಿಜವಾದ ಆದ್ಯತೆಗಳೇನು ಅನ್ನುವುದನ್ನು ರಾಜ್ಯದ ಜನರ ಮುಂದೆ ಸಂಪೂರ್ಣವಾಗಿ ಬೆತ್ತಲು ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಒಂದು ಕಡೆ ರಾಜ್ಯದ ಬೆನ್ನೆಲುಬಾದ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವ ಈ ಮಹತ್ವದ ಸಮಯದಲ್ಲಿ ಕರ್ನಾಟಕಕ್ಕೆ ಒಬ್ಬ ಪೂರ್ಣಾವಧಿ ಕೃಷಿ ಸಚಿವರೇ ಇಲ್ಲ. ಬಿತ್ತನೆ ಬೀಜಗಳ ಲಭ್ಯತೆ, ರಸಗೊಬ್ಬರಗಳ ಪೂರೈಕೆ, ಬೆಳೆ ಸಾಲ, ಬೆಳೆ ವಿಮೆ, ಮಳೆ ಪರಿಸ್ಥಿತಿಯ ಅವಲೋಕನ, ಇವೆಲ್ಲದರ ಬಗ್ಗೆ ಕಾಳಜಿ ವಹಿಸಬೇಕಾದ ಕೃಷಿ ಇಲಾಖೆ ಈಗ ಸಚಿವರಿಲ್ಲದೆ ಅನಾಥವಾಗಿದೆ ಎಂದು ಅವರು ಟ್ವೀಟ್ ಮಾಡಿ ಕುಟುಕಿದ್ದಾರೆ.

ಮತ್ತೊಂದು ಕಡೆ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದೆ. ಸಾವಿರಾರು ಸರ್ಕಾರಿ ಶಾಲೆಗಳಲ್ಲಿ ಮಳೆ ಬಂದರೆ ಸೋರುವ ಕೊಠಡಿಗಳು, ಕುಸಿಯುವ ಗೋಡೆಗಳು ದುರಸ್ತಿಗಾಗಿ ಕಾಯುತ್ತಿವೆ, ಶೌಚಾಲಯಗಳ ಕೊರತೆ ಇದೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ, ಶಿಕ್ಷಕರ ಕೊರತೆ ನೀಗಿಸುವ ನೂರಾರು ತುರ್ತು ಸವಾಲುಗಳು ಬೆಟ್ಟದಷ್ಟಿವೆ. ಆದರೆ ರಾಜ್ಯಕ್ಕೆ ಒಬ್ಬ ಶಿಕ್ಷಣ ಸಚಿವರೇ ಗತಿಯಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರ ಕಣ್ಣಿರುವುದು ಕೇವಲ ಲೂಟಿ ಹೊಡೆಯುವ ಖಾತೆಗಳ ಮೇಲೆ ಮಾತ್ರ ಎಂದು ಕಾಲೆಳೆದಿದ್ದಾರೆ.

ರೈತರು, ವಿದ್ಯಾರ್ಥಿಗಳ ಕಷ್ಟ ಇವರಿಗೆ ಬೇಕಾಗಿಲ್ಲ. ಸಾವಿರಾರು ಕೋಟಿ ರೂಪಾಯಿಗಳ ಸಂಪನ್ಮೂಲ, ಗುತ್ತಿಗೆ ಮತ್ತು ಕಮಿಷನ್ ದಂಧೆಗೆ ಅನುಕೂಲವಾಗುವ ಖಾತೆಗಳಿಗಾಗಿ ಮಾತ್ರ ಕಾಂಗ್ರೆಸ್ ನಾಯಕರ ನಡುವೆ ರಣಹದ್ದುಗಳಂತೆ ಭಾರೀ ಪೈಪೋಟಿ ನಡೆಯುತ್ತಿದೆ. ಸಿಎಂ ಡಿ.ಕೆ.ಶಿವಕುಮಾರ್ ಅವರೇ ಇದೇನಾ ನಿಮ್ಮ ಜನಪರ ಆಡಳಿತ ಎಂದು ಅಶೋಕ್ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಖಾತೆಯನ್ನು ಕಾಂಗ್ರೆಸ್ ಹೈಕಮಾಂಡ್ ಒಬ್ಬ ಸಮರ್ಥ ಸಚಿವರಿಗೆ ಕೊಟ್ಟಿದೆ ಎಂದು ಡಂಗುರ ಸಾರುತ್ತಾರೆ. ಆದರೆ ನಗರದ ಯೋಜನೆ ಮತ್ತು ಅಭಿವೃದ್ಧಿಗೆ ಅತ್ಯಂತ ಮಹತ್ವವಾಗಿರುವ ಬಿಡಿಎ ಮತ್ತು ಬಿಎಂಆರ್ ಡಿ ಎ ಖಾತೆಯನ್ನು ಮುಖ್ಯಮಂತ್ರಿಗಳು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ, ಹಾಗಿದ್ದರೆ ಸಚಿವರ ಬಳಿ ಉಳಿದಿರುವುದು ಏನು, ಈ ಸರ್ಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಎಂಬುದು ಅಭಿವೃದ್ಧಿಗಾಗಿ, ಆಡಳಿತಕ್ಕಾಗಿ ಮಾಡಿರುವ ವ್ಯವಸ್ಥೆಯಲ್ಲ, ಬದಲಿಗೆ ಸಂಪನ್ಮೂಲ ಹಂಚಿಕೆಗೆ, ರಾಜ್ಯದ ಜನರ ತೆರಿಗೆ ಹಣವನ್ನ ಲೂಟಿ ಮಾಡಲು ಮಾಡಿದ ರಾಜಕೀಯ ಹೊಂದಾಣಿಕೆ ಎಂದು ಆರೋಪಿಸಿದ್ದಾರೆ

ಕಳೆದ ಹಲವು ವಾರಗಳಿಂದ ಇಡೀ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಕಾಂಗ್ರೆಸ್‌ನ ಒಳಜಗಳ, ಅಧಿಕಾರದ ಕಿತ್ತಾಟ ಮತ್ತು ಹುದ್ದೆಗಳ ಹಂಚಿಕೆಯ ರಾಜಕಾರಣಕ್ಕೆ ರಾಜ್ಯದ ಜನತೆ ಬಲಿಯಾಗುತ್ತಿದ್ದಾರೆ.

ಆದರೆ ಯಾರಿಗೆ ಯಾವ ಖಾತೆ, ಯಾರಿಗೆ ಎಷ್ಟು ಅಧಿಕಾರ, ಯಾರಿಗೆ ಎಷ್ಟು ಸಂಪನ್ಮೂಲ, ಯಾರಿಗೆ ಎಷ್ಟು ಲೂಟಿಯ ಅವಕಾಶ ಎಂಬ ಲೆಕ್ಕಾಚಾರ ಮಾತ್ರ ಕಾಂಗ್ರೆಸ್ ನಾಯಕರ ಏಕೈಕ ಅಜೆಂಡಾ ಆಗಿದೆ ಎಂದು ಪ್ರತಿಪಕ್ಷ ನಾಯಕ ಟೀಕಾಪ್ರಹಾರ ನಡೆಸಿದ್ದಾರೆ.