ಉತ್ತಮ ಆಡಳಿತ ನೀಡುವಲ್ಲಿ ಬಿ.ಎಸ್.ವೈ ಸಂಪೂರ್ಣ ವಿಫಲ -ಧ್ರುವನಾರಾಯಣ್

ಮೈಸೂರು: ರಾಜ್ಯದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ದೂರಿದರು.
ನಗರದಲ್ಲಿ ಭಾನುವಾರ ಧ್ರುವನಾರಾಯಣ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಯಡಿಯೂರಪ್ಪನವರಿಗೆ ಈ ಹಿಂದೆಯೂ ಉತ್ತಮ ಆಡಳಿತ ಕೊಡುವ ಅವಕಾಶ ಸಿಕ್ಕಿತ್ತು. ಆಗಲೂ ವಿಫಲರಾಗಿದ್ದರು. ಈಗಲೂ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆಂದರು.
ಯಡಿಯೂರಪ್ಪನವರ ನೇತೃತ್ವದ ಸರಕಾರ ಅಭಿವೃದ್ಧಿ ಕಾರ್ಯದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದರು.
ಬಿಜೆಪಿಗೆ ದಲಿತರ ಪರ ಕಾಲಜಿ ಇಲ್ಲ. ಪರಿಶಿಷ್ಟರ ಅಭಿವೃದ್ಧಿಗಾಗಿ ಇರುವ ಎಸ್ ಸಿಎಸ್ ಪಿ-ಟಿಎಸ್ ಪಿ ಯೋಜನೆಗಳನ್ನು ಎಲ್ಲಾ ಇಲಾಖೆಗಳಲ್ಲಿ ಅನುಷ್ಠಾನಗೊಳಿಸಲು ವಿಫಲರಾಗಿದ್ದಾರೆ. ಈ ಯೋಜನೆಯಡಿ ಬಿಡುಗಡೆ ಆಗಿರುವ ಹಣವನ್ನು ಯಾವೊಂದು ಇಲಾಖೆಯಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಬಳಕೆ ಆಗಿಲ್ಲವೆಂದರು.
ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಧ್ರುವನಾರಾಯಣ್ ಹೇಳಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ಕುಮಾರ್ ಕಟೀಲ್ ಒಬ್ಬ ಪೆದ್ದನ ರೀತಿ ಮಾತನಾಡುತ್ತಾರೆಂದು ಅವರು ಹೇಳಿ, ಕಟೀಲ್ ಅವರದ್ದೆ ಒಂದು ಗುಂಪಿದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಹಾಗೂ ಸಿಎಂ ವಿರುದ್ದ ಯತ್ನಾಳ್ ಹೇಳಿಕೆಗಳೆಲ್ಲ ಆ ಗುಂಪಿನಿಂದಲೇ ಸೂಚನೆ ಬರುತ್ತದೆ ಎಚಿದು ಆರೋಪಿಸಿದರು.
ಯತ್ನಾಳ್ ಆ ರೀತಿ ಹೇಳಿಕೆ ನೀಡಿದರೂ ಅವರ ಮೇಲೆ ಕ್ರಮ ಏಕೆ ಕೈಗೊಂಡಿಲ್ಲ ಎಂದು ಧ್ರುವನಾರಾಯಣ್ ಪ್ರಶ್ನಿಸಿದರು.
ಬಿಜೆಪಿಯಲ್ಲೆ ವಿರೋಧ ಪಕ್ಷದವರಂತೆ ಮಾತನಾಡುವ ವ್ಯಕ್ತಿಗಳಿದ್ದಾರೆ. ಅವರಿಗೆಲ್ಲ ಕಟೀಲ್ ಅವರೇ ಕುಮ್ಮಕ್ಕು ನೀಡುತ್ತಿದ್ದಾರೆಂದು ಧ್ರುವನಾರಾಯಣ್ ಹೇಳಿದರು.
ರಾಜ್ಯದಲ್ಲಿ ಇಂತಹ ಕೆಟ್ಟ ಸರ್ಕಾರವನ್ನು ಯಾವತ್ತೂ ನೋಡಿಲ್ಲ. ಸಂಪುಟದಲ್ಲಿ ಸಚಿವರ ಮಧ್ಯೆ ಸಾಮರಸ್ಯವಿಲ್ಲ. ಹಲವು ಮಂತ್ರಿಗಳ ಖಾತೆಯನ್ನು ಸಿಎಂ ಪ್ರತಿ ದಿನ ಬದಲಾವಣೆ ಮಾಡುತ್ತಾರೆ. ಈ ರೀತಿ ಈವರಗೂ ಯಾವುದೇ ಸರಕಾರದಲ್ಲಿ ನಡೆದಿಲ್ಲವೆಂದರು.