ಪೆಟ್ರೋಲ್ ಬೆಲೆ ಶತಕ, ಲಸಿಕೆ ಮಂದಗತಿ, ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ -ಡಿ.ಕೆ ಶಿವಕುಮಾರ್

ರಾಮನಗರ: ಜನವರಿಯಿಂದ ಪೆಟ್ರೋಲ್ ದರ 43 ಬಾರಿ ಏರಿಕೆಯಾಗಿದೆ. ಇದು ದೇಶದ ಆರ್ಥಿಕ ಮತ್ತು ಆಡಳಿತಾತ್ಮಕ ರಂಗಗಳಲ್ಲಿ ಸರ್ಕಾರದ ಅಸಮರ್ಥತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ರಾಮನಗರ ಜಿಲ್ಲೆಯ ಕೂಟಗಲ್ ಹೋಬಳಿಯ ಜಾಲಮಂಗಲ ಗ್ರಾಮದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಡವರಿಗೆ ಆಹಾರ ಮತ್ತು ತರಕಾರಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಅವರು ಮಾತನಾಡಿದರು.
ಇಂದು ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ರೂ. 100, ಅಡುಗೆ ಎಣ್ಣೆ ಬೆಲೆ ಲೀಟರ್ ರೂ. 220 ತಲುಪಿದೆ. ಲಸಿಕೆ ಅಭಿಯಾನ ಆರಂಭವಾಗಿ 5 ತಿಂಗಳಾದರೂ ಕೇವಲ 3.17% ಭಾರತೀಯರು ಮಾತ್ರ ಕೋವಿಡ್ ಲಸಿಕೆ ಪಡೆದಿದ್ದಾರೆ. ಇದು ಕೂಡ ಸರ್ಕಾರದ ವೈಫಲ್ಯಕ್ಕೆ ಸ್ಪಷ್ಟ ಉದಾಹರಣೆ ಎಂದರು.
ಜಾತಿ ಮತ್ತು ಧರ್ಮಗಳನ್ನು ಲೆಕ್ಕ ಹಾಕದೆ ಎಲ್ಲಾ ಜನರಿಗೆ ಕಾಂಗ್ರೆಸ್ ಉಚಿತ ಲಸಿಕೆ ನೀಡುತ್ತಿದೆ. ನಾನು 3 ಲಕ್ಷ ಜನರಿಗೆ ಉಚಿತ ಲಸಿಕೆ ಹಾಕುವ ಅಭಿಯಾನವನ್ನು ದಾವಣಗೆರೆಯಲ್ಲಿ ಪ್ರಾರಂಭಿಸಿದೆ. ಆದರೆ ಮತ್ತೊಂದೆಡೆ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಪ್ರತಿ ಲಸಿಕೆಗೆ ರೂ. 900 ದರ ನಿಗದಿ ಪಡಿಸಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕಿರುವ ಸಾರ್ವಜನಿಕರ ಮೇಲಿನ ಉದಾಸೀನತೆಗೆ ಸಾಕ್ಷಿ ಎಂದು ಡಿಕೆಶಿ ಟೀಕಿಸಿದರು.
ಬಿಜೆಪಿ ಸರ್ಕಾರವು ಕಾಂಗ್ರೆಸ್ ನ ವ್ಯಾಕ್ಸಿನೇಷನ್ ಯೋಜನೆಗೆ ಅನುಮತಿ ನೀಡಿದರೆ, ಇಡೀ ರಾಜ್ಯಾದ್ಯಂತ ಉಚಿತ ಲಸಿಕೆ ಹಾಕುವ ರೂ. 100 ಕೋಟಿ ಯೋಜನೆ ಜಾರಿಗೆ ತಯಾರಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು.