ಮೈಸೂರು: ಮೈಸೂರಲ್ಲಿ ಜೂ. 14ರಿಂದ 21ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ನಡೆದ ಸಭೆ ಬಳಿಕ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಕೊರೊನಾ ನಿಯಂತ್ರಣಕ್ಕಾಗಿ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಜೂ. 14ರ ನಂತರವೂ ಮೈಸೂರಿನಲ್ಲಿ ಲಾಕ್ಡೌನ್ ಮುಂದುವರಿಯಲಿದೆ. ಆದರೆ ಯಾವುದಕ್ಕೆ ವಿನಾಯಿತಿ ಕೊಡಬೇಕು ಎಂಬುದರ ಕುರಿತು ಚರ್ಚಿಸಿ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಆದೇಶ ಹೊರಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅನ್ ಲಾಕ್ ಮಾಡಬೇಕಿದ್ರೆ ಶೇ.5ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್ ಇರಬೇಕು ಅನ್ನುವ ನಿಯಮ ಇದೆ. ಮೈಸೂರಿನಲ್ಲಿ ಈಗ ಶೇ. 20 ರಷ್ಟು ಪಾಸಿಟಿವಿಟಿ ರೇಟ್ ಇದೆ. ಇದನ್ನು ಅತೀ ಶೀಘ್ರದಲ್ಲಿ ಶೇ. 5ಕ್ಕಿಳಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಹಾಗೂ ಎಸ್ಪಿ ಒಂದೇ ಕಾರಿನಲ್ಲಿ ಕ್ಷೇತ್ರ ಸಂಚಾರ ಮಾಡಲಿದ್ದಾರೆ. ಮೈಸೂರಿನ ಎಲ್ಲಾ 11 ಕ್ಷೇತ್ರಗಳಿಗೂ ಒಟ್ಟಿಗೆ ಭೇಟಿಕೊಟ್ಟು ಕೊರೊನಾ ಪರಿಸ್ಥಿತಿ ತಹಬದಿಗೆ ತರಲಿದ್ದಾರೆ ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.

