ಡಿಎಚ್‍ಒ ಡಾ. ಅಮರನಾಥ್ ವರ್ಗಾವಣೆ

ಮೈಸೂರು: ಮೈಸೂರಿನಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳ ಎತ್ತಂಗಡಿ ನಂತರ ಈಗ ಮತ್ತೊಬ್ಬ ಅಧಿಕಾರಿಗೆ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಸರಿಯಾಗಿ ನಿರ್ವಹಣೆ ಮಾಡಲಿಲ್ಲ ಎನ್ನುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಅಮರನಾಥ್‍ರನ್ನು ವರ್ಗಾವಣೆ ಮಾಡಲಾಗಿದೆ.
ಅಮರನಾಥ್ ಅವರ ಜಾಗಕ್ಕೆ ಆರೋಗ್ಯ ಇಲಾಖೆ ವಿಭಾಗಿಯ ಉಪ ನಿರ್ದೇಶಕ ಡಾ.ಕೆ.ಎಚ್. ಪ್ರಸಾದ್‍ರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.
ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ, ಸಾವು ಅಧಿಕಗೊಳ್ಳಲು ಸೂಕ್ತ ನಿರ್ವಹಣೆ ಕೊರತೆಯೇ ಕಾರಣ ಎನ್ನಲಾಗಿತ್ತು. ಪರಿಸ್ಥಿತಿ ನಿರ್ವಹಣೆ ವಿಚಾರವಾಗಿ ಆರೋಗ್ಯಾಧಿಕಾರಿ ಅಮರನಾಥ್ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತರಾಗಿದ್ದ ಶಿಲ್ಪಾ ನಾಗ್ ಅವರಿಗೆ ಕಾಲಕಾಲಕ್ಕೆ ಸೂಕ್ತ ಮಾಹಿತಿ ನೀಡಿ ಸಮನ್ವಯ ಮಾಡುವುದರಲ್ಲೂ ಅಮರನಾಥ್ ವಿಫಲರಾಗಿದ್ದರು ಎನ್ನುವ ಮಾಹಿತಿ ಸರಕಾರಕ್ಕೆ ಹೋಗಿತ್ತು.
ಸದ್ಯ ನೇಮಕಗೊಂಡಿರುವ ಡಾ. ಪ್ರಸಾದ್ ಈ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದ ಸುಳ್ವಾಡಿ ಪ್ರಸಾದ ತಿಂದು ಬಲಿಯಾದ ದುರಂತದಲ್ಲಿ ಸಕಾಲಿಕವಾಗಿ ಕಾರ್ಯನಿರ್ವಹಿಸಿದ್ದರು. ಆ ಮೂಲಕ ನೂರಾರು ಜನರನ್ನು ಬದುಕುಳಿಯುವಂತೆ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಕೋವಿಡ್‍ನಂಥ ವಿಕೋಪ ಸ್ಥಿತಿ ನಿರ್ವಹಣೆಗಾಗಿ ಪ್ರಸಾದ್ ಅವರನ್ನು ಮೈಸೂರು ಜಿಲ್ಲೆಯ ನೂತನ ಆರೋಗ್ಯಾಧಿಕಾರಿಯಾಗಿ ನೇಮಕ ಮಾಡಲಾಗಿದೆ.