ಕಾಂಗ್ರೆಸ್ ಅಮಲಿನಲ್ಲಿ ತೇಲುತ್ತಿದೆ:ವಿಜಯೇಂದ್ರ ಚಾಟಿ

ಮಂಡ್ಯ: ಬಹುಮತ ದೊಂದಿಗೆ ಅಧಿಕಾರಕ್ಕೆ ಬಂದೆವೆಂದು ಕಾಂಗ್ರೆಸ್ ಅಮಲಿನಲ್ಲಿ ತೇಲುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಚಾಟಿ ಬೀಸಿದರು.

ಮಂಡ್ಯದಲ್ಲಿ ನಡೆದ ಜೆಡಿಎಸ್-ಬಿಜೆಪಿ ಮುಖಂಡರು, ಕಾರ್ಯಕರ್ತರ ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ಈಗ ರಾಜ್ಯದಲ್ಲಿ ಭೀಕರ ಬರಗಾಲವಿದೆ,800ಕ್ಕೂ ಹೆಚ್ಚು ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನ-ಜಾನುವಾರು ಕುಡಿಯುವ ನೀರು, ಮೇವಿಲ್ಲದೆ ಪರಿತಪಿಸುತ್ತಿದೆ. ಕಷ್ಟದಲ್ಲಿರುವ ಜನರ ಬಗ್ಗೆ ಕನಿಕರ ಇಲ್ಲದ ಸಿಎಂ ಇದ್ದಾರೆ. ಅವರು ಒಂದು ವರ್ಗದ ಸಿಎಂ ಅಲ್ಲ, ಆರೂವರೆ ಕೋಟಿ ಜನರ ಸಿಎಂ ಎಂಬುದನ್ನ ಮರೆಯಬಾರದು ಎಂದು ಕಿಡಿಕಾರಿದರು.

ಬಿಜೆಪಿ-ಜೆಡಿಎಸ್ ಒಂದಾಗ್ತಿದ್ದಂತೆ ಕಾಂಗ್ರೆಸ್ಗೆ ನಿದ್ರೆ ಬರ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ತತ್ತರಿಸಿ ಹೋಗಿದ್ದಾರೆ. ಭಯದಿಂದ ಮಂತ್ರಿ ಮಂಡಲದ ಸದಸ್ಯರು ಚುನಾವಣೆ ಅಭ್ಯರ್ಥಿ ಆಗಲಿಲ್ಲ ಎಂದು ಟೀಕಿಸಿದರು.

ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಭಾವೀ ಸಂಸದರು ಎಂದ ಕರೆದ ವಿಜಯೇಂದ್ರ,
ಜನರಿಂದ ಜನರಿಗಾಗಿ ಇರುವ ಕುಮಾರಸ್ವಾಮಿ ಮಂಡ್ಯದಿಂದ ಸಂಸದರಾಗಬೇಕು ಎಂದು ಹೇಳಿದರು.

28 ಕ್ಷೇತ್ರಗಳಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳು ಗೆಲ್ಲುವುದು ನಮ್ಮ ಗುರಿ. ಮೈಮರೆಯವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿ ಅವರು, ದೇವೇಗೌಡರು, ಯಡಿಯೂರಪ್ಪ ಅವರು ಎಲ್ಲರೂ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾರೆ. ನಾವೇ ನಾಯಕರು, ಅಭ್ಯರ್ಥಿ ಎಂದು ತಿಳಿದು ಕೆಲಸ ಮಾಡಬೇಕು ಎಂದು ವಿಜಯೇಂದ್ರ ಕಾರ್ಯಕರ್ತರು, ನಾಯಕರಿಗೆ ಕರೆ ನೀಡಿದರು.