ಜಗದೀಶ್ ಶೆಟ್ಟರ್ ಹರಕೆಯ ಕುರಿ:ಲಕ್ಷ್ಮಣ ಸವದಿ

ಬೆಳಗಾವಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಯವರು ಹರಕೆಯ ಕುರಿ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಬಾಂಬ್ ಸಿಡಿಸಿದ್ದಾರೆ.

ಬೆಳಗಾವಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕುರಿತು ಮಾಧ್ಯಮಗಳ ಜೊತೆ ಪ್ರತಿಕ್ರಿಯಿಸಿದ‌ ಸವದಿ,ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟು ಹೋಗಿದ್ದರು ಎಂಬ ಕೋಪವಿದೆ, ಹಾಗಾಗಿ ಸ್ವಾಭಿಮಾನದ ಸುಳಿಯಲ್ಲಿ ಸಿಲುಕಿ ಸೋಲಲಿ ಎಂಬ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೊಸ‌ ಬಾಂಬ್ ಸಿಡಿಸಿದರು.

ಶೆಟ್ಟರ್ ಅವರನ್ನ ಸ್ಪರ್ಧೆಗಿಳಿಸಿ ಹರಕೆ ಕುರಿ ಮಾಡಲು ಹೊರಟಿದ್ದಾರೆ, ಬಿಜೆಪಿಯಲ್ಲಿ ಕೆಲವರನ್ನ ಮೂಲೆಗುಂಪು ಮಾಡುವ ವ್ಯವಸ್ಥೆ ಇದೆ,ಪ್ರಾಮಾಣಿಕವಾಗಿ ಕೆಲಸ ಮಾಡತ್ತಿದ್ದ ಸಂಗಣ್ಣ ಕರಡಿಗೆ ಟಿಕೆಟ್ ಕೊಟ್ಟಿಲ್ಲ. ಜನರಿಗೆ ವಂಚನೆ ಮಾಡುವವರನ್ನ ಅಭ್ಯರ್ಥಿ ಮಾಡಿದ್ದಾರೆ ಎಂದು ಟೀಕಿಸಿದರು.

ಶೆಟ್ಟರ್ ಗೂ ಬೆಳಗಾವಿಗೂ ಏನು ಸಂಬಂಧ, ಜೋಶಿಯನ್ನ ರಾಜ್ಯಸಭೆ ಸದಸ್ಯರನ್ನಾಗಿ ಮಾಡಬಹುದಿತ್ತು ಅಥವಾ ಶೆಟ್ಟರ್ ರನ್ನಾದ್ರೂ ರಾಜ್ಯಸಭಾ ಸದಸ್ಯರನ್ನಾಗಿ ಮಾಡಬಹುದಿತ್ತು ಧಾರವಾಡದವರಿಗೆ ಬೆಳಗಾವಿ ಟಿಕೆಟ್ ಹೇಗೆ ಕೊಟ್ಟಿದ್ದಾರೊ ಎಂದು ಮಾರ್ಮಿಕವಾಗಿ ನುಡಿದರು.

ಮೋದಿ ಅವರು ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ, ಈಗ ಕರ್ನಾಟಕದ ಬಿಜೆಪಿಯಲ್ಲಿ ಏನು ನಡೆಯುತ್ತಿದೆ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆಯೇ ಇಲ್ಲ ಎಂದು ಸವದಿ ಹೇಳಿದರು.