ಯಡಿಯೂರಪ್ಪ ಸಮ್ಮುಖದಲ್ಲಿ ಮರಳಿ ಗೂಡು ಸೇರಿದ ಜನಾರ್ದನ ರೆಡ್ಡಿ

ಬೆಂಗಳೂರು:  ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೋಮವಾರ ಮತ್ತೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಕೆಆರ್‌ಪಿಪಿ ಪಕ್ಷ ವಿಲೀನ ಕಾರ್ಯಕ್ರಮದಲ್ಲಿ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಸೇರಿ  ಪಕ್ಷದ ಎಲ್ಲ ಪದಾಧಿಕಾರಿಗಳು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾದರು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಪಕ್ಷದ‌ ಬಾವುಟ ನೀಡಿ ಜನಾರ್ದನ ರೆಡ್ಡಿ ಮತ್ತಿತರರನ್ನು ಬರಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡಲು ಪಕ್ಷದ ಹಲವಾರು ಸದಸ್ಯರೊಂದಿಗೆ ಬಿಜೆಪಿ ಸೇರಿದ್ದಾಗಿ ಈ ವೇಳೆ ಜನಾರ್ದನ ರೆಡ್ಡಿ ಹೇಳಿದರು.

ಈ ವೇಳೆ ರೆಡ್ಡಿ ಪರಮಾಪ್ತ ಮಾಜಿ ಸಚಿವರಾದ ಶ್ರೀರಾಮುಲು,ಮಾಜಿ ಸಚಿವರಾದ ಆನಂದ್ ಸಿಂಗ್, ಸಿ.ಟಿ ರವಿ, ಅಶ್ವಥ್‌ನಾರಾಯಣ ಅವರು ಉಪಸ್ಥಿತರಿದ್ದರು.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜನಾರ್ದನ ರೆಡ್ಡಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು, ಆಗ ಅವರು ಕಾಂಗ್ರೆಸ್ ಗೆ ಸೇರುತ್ತಾರೆ ಎಂಬ ‌ವದಂತೆ ಹಬ್ಬಿತ್ತು,ಆದರೆ ಇಂದು ಅಧಿಕೃತವಾಗಿ ಬಿಜೆಪಿ ಗೆ ಸೇರುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.