ಮೈಸೂರು: ಭಾರತೀಯ ಧಾರ್ಮಿಕ ಪರಂಪರೆ ಸಾಕ್ಷಿ ಪ್ರಜ್ಞೆಯಂತಿದ್ದ ಸ್ವಾಮಿ ವಿವೇಕಾನಂದರ ಆದರ್ಶ ಯುವಜನತೆಗೆ ತಲುಪಿಸಿದರೆ ರಾಷ್ಟ್ರಪ್ರಜ್ಞೆ ಬೆಳಗಲಿದೆ ಎಂದು ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ತಿಳಿಸಿದರು.
ವಸ್ತು ಪ್ರದರ್ಶನ ಪ್ರಾಧಿಕಾರ ವತಿಯಿಂದ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ವೇಳೆ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ನಂತರ ಅವರು ಮಾತನಾಡಿದರು.
ವೀರಸನ್ಯಾಸಿ ವಿವೇಕಾನಂದರು ಕಡಲಿನಾಚೆ ದೇಶಗಳಿಗೆ ತೆರಳಿ ಸನಾತನ ಸಂಸ್ಕೃತಿ, ಧಾರ್ಮಿಕ ಭಾರತೀಯತೆಯನ್ನು ಪರಿಚಯಿಸಿದರು.
ಯುವಜನರ ಹೃದಯ ಮಂದಿರದಲ್ಲಿ ಶೌರ್ಯ ಧೈರ್ಯದ ಪರಿಕಲ್ಪನೆ ತುಂಬಲು ದೇಶದಾದ್ಯಂತ ಸಂಚರಿಸಿದರು.
ಆಧ್ಯಾತ್ಮಿಕ ಸಂತ ಶ್ರೀರಾಮಕೃಷ್ಣ ಪರಮಹಂಸರು ಮತ್ತು ಶಾರದಾ ಮಾತೆಯರ ಪದತಲದಲ್ಲಿ ದಕ್ಷಿಣೇಶ್ವರದಲ್ಲಿ ಬೆಳೆದರು. ಯುವಜನತೆಗೆ ವಿವೇಕಾನಂದರ ಜೀವನದ ಮಹತ್ವತಿಳಿಸಿಕೊಡುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಹಿರಿಯ ಸಮಾಜ ಸೇವಕ ಡಾ. ಕೆ ರಘುರಾಂ ವಾಜಪೇಯಿ ಮಾತನಾಡಿ, ವಿಶ್ವದ ಎಲ್ಲ ಧರ್ಮಗಳಿಗೂ ಹಿಂದೂ ಧರ್ಮವೇ ಆಧಾರಸ್ತಂಭ. ಅಧ್ಯಾತ್ಮ, ಸಾಮರಸ್ಯ ಮತ್ತು ಸಮೃದ್ಧ ಸಂಸ್ಕೃತಿಯ ತವರೂರು ಭಾರತ ಎಂದು ತಿಳಿಸಿಕೊಟ್ಟವರು ಸ್ವಾಮಿ ವಿವೇಕಾನಂದರು ಎಂದು ತಿಳಿಸಿದರು.
ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹೆಸರಿನಲ್ಲಿ ನಡೆಯುವ ಯುವ ದಿನಾಚರಣೆಯು ಯುವಕರ ಬದುಕು ಬದಲಾಯಿಸಬಲ್ಲ ಸ್ಫೂರ್ತಿ ದಿನವಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ನಾಯಕರಿಗೆ ಸ್ವಾಮಿ ವಿವೇಕಾನಂದರೇ ಸ್ಪೂರ್ತಿಯ ಸೆಲೆಯಾಗಿದ್ದರು.
ರವೀಂದ್ರನಾಥ್ ಟ್ಯಾಗೋರ್, ಮಹಾತ್ಮ ಗಾಂಧೀಜಿ ಅವರು ವಿವೇಕಾನಂದರ ಚಿಂತನೆಗೆ ಪ್ರಭಾವಿತರಾಗಿದ್ದರು. ಹೀಗಾಗಿ ಅವರ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡು ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ವಸ್ತುಪ್ರದರ್ಶನ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧಿಕಾರಿ ಗಿರೀಶ್ , AEE ಯಾದಗಿರಿ ,ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ,ಪರಿಸರ ಸ್ನೇಹಿ ಬಳಗದ ಅಧ್ಯಕ್ಷ ಲೋಹಿತ್ ,ಪೃಥ್ವಿ ಸಿಂಗ್ ಚಂದವತ್ ,ಮಹೇಂದ್ರ ಎಂ ಶೈವಾ ,ಸೂರಜ್ ,ಸದಾನಂದ ,ಸುಚೀಂದ್ರ ,ಮತ್ತಿತರರು ಹಾಜರಿದ್ದರು.

