ಮೈಸೂರು-ಕುಶಾಲನಗರ ರೈಲ್ವೆ ನನ್ನ ಯೋಜನೆ: ಪ್ರಜ್ವಲ್ ರೇವಣ್ಣಗೆ ಪ್ರತಾಪ್ ಸಿಂಹ ಟಾಂಗ್

ಮೈಸೂರು:ಮೈಸೂರು-ಕುಶಾಲನಗರ ರೈಲ್ವೆ  ಯೋಜನೆ ನನ್ನದು ಎಂದು ಸಂಸದ ಪ್ರತಾಪ್ ಸಿಂಹ ಅವರು ಮತ್ತೊಬ್ಬ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಟಾಂಗ್ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರೇ ಈ ಯೋಜನೆಗೆ 2019ರಲ್ಲೇ ಅನುಮತಿ ದೊರಕಿದ್ದು ಎರಡು ಹಂತಗಳಲ್ಲಿ ಅನುಮೋದನೆ ಸಿಕ್ಕಿದೆ ಎಂದು  ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು-ಹಾಸನ ರೈಲ್ವೆ ಹಳಿಯನ್ನು ಮೀಟರ್ ಗೇಜ್  ನಿಂದ ಬ್ರಾಡ್ ಗೇಜ್ ಆಗಿ ಪರಿವರ್ತಿಸಲು ದೇವೇಗೌಡರಿಗೆ 21 ವರ್ಷ ಬೇಕಾಯಿತು. ಸದಾನಂದ ಗೌಡ ಅವರು ರೈಲ್ವೆ ಸಚಿವರಾಗಿದ್ದಾಗ ಇದಕ್ಕೆ ಸಹಕಾರ ನೀಡಿದ್ದರು ಎಂದಿದ್ದಾರೆ.

ಗುರುವಾರ ಲೋಕಸಭೆಯಲ್ಲಿ ಮಾತನಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ ಮೈಸೂರು-ಕುಶಾಲನಗರ ಹಾಗೂ ಹೆಜ್ಜಾಲ-ಚಾಮರಾಜನಗರ ರೈಲ್ವೆ ಮಾರ್ಗಗಳ ಕಾಮಗಾರಿಗಳು ಸೇರಿದಂತೆ  ರಾಜ್ಯದ ಒಟ್ಟು ಒಂಭತ್ತು ರೈಲ್ವೆ ಕಾಮಗಾರಿಗಳ ಕುರಿತು ಪ್ರಸ್ತಾಪಿಸಿದ್ದರು.

ತ್ವರಿತವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸಲು ಮನವಿ ಮಾಡಿದ್ದರು.

ಅದಕ್ಕೆ ಟ್ವೀಟ್ ಮೂಲಕ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.