ಬೆಂಗಳೂರು: ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣದಿಂದಲೇ ಇತ್ತೀಚಿನ ಗೊಂದಲ, ಗಲಾಟೆ-ಗದ್ದಲಗಳಿಗೆ ಕಾರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಈ ದೇಶದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾ ಬಂದಿದೆ ಎಂದು ಹೇಳಿದರು.
ವೋಟ್ ಬ್ಯಾಂಕ್ ನಿಂದ ಕೈ ನಾಯಕರು ಸಿಂಹಾಸನದ ಮೇಲೆ ಕೂತಿದ್ದಾರೆ, ಅವರಿಗೆ ಎಲ್ಲಿ ಅಧಿಕಾರ ಕೈಜಾರಿ ಹೋಗುತ್ತೋ ಎನ್ನುವ ಭಯ ಅದಕ್ಕಾಗಿಯೇ ಹಿಜಾಬ್ ಬಗ್ಗೆ ಗಟ್ಟಿತನದಿಂದ ಕಾಂಗ್ರೆಸ್ ನಾಯಕರು ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಡಿ.ಕೆ. ಶಿವಕುಮಾರ್ ಇದರ ಬಗ್ಗೆ ಮಾತಾಡಬೇಡಿ ಅಂತಾರೆ. ಕಾಂಗ್ರೆಸ್ಗೆ ವೋಟ್ ಬ್ಯಾಂಕ್ ಸ್ವಲ್ಪ ಅಲುಗಾಡಿದರೂ ಒತ್ತಡ ಆಗಿಬಿಡುತ್ತದೆ ಎಂದು ಆರಗ ಜ್ಞಾನೇಂದ್ರ ವ್ಯಂಗ್ಯ ವಾಡಿದರು.
ಆಜಾನ್ಗೆ ಮಾತ್ರ ಶಬ್ದ ಮಿತಿ ಅಲ್ಲ, ಬಸ್ ಸೌಂಡಿಗೂ ಮಿತಿ ಇದೆ, ಶಬ್ದ ಮಾಲಿನ್ಯ ಬಗ್ಗೆ ಕೋರ್ಟ್ ಆದೇಶ ನೀಡಿದೆ ಎಂದು ಇದೇ ವೇಳೆ ಆರಗ ಜ್ಞಾನೇಂದ್ರ ಹೇಳಿದರು
ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಶಬ್ದ ಮಿತಿ ಬಗ್ಗೆ, ಮೈಕ್ಗಳ ಬಳಕೆ ಬಗ್ಗೆ ಮಸೀದಿ, ದೇವಸ್ಥಾನ ಮಂಡಳಿಗಳಿಗೆ ತಿಳಿಸಲು ಪೊಲೀಸರಿಗೆ ಹೇಳಿದ್ದೇವೆ ಎಂದು ತಿಳಿಸಿದರು.

