ನವದೆಹಲಿ: ಗುರು ತೇಜ್ ಬಹದ್ದೂರ್ ಅವರ 400ನೇ ಜನ್ಮ ವಾರ್ಷಿಕೋತ್ಸವ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾತ್ರಿ 9.30 ಕ್ಕೆ ಐತಿಹಾಸಿಕ ಕೆಂಪುಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಲಿದ್ದಾರೆ.
ಕೆಂಪುಕೋಟೆಯ ಲಾನ್ಸ್ ನಿಂದ ಮೋದಿ ಭಾಷಣ ಮಾಡಲಿದ್ದಾರೆ.
1675ರಲ್ಲಿ ಸಿಖ್ ಸಮುದಾಯದ 9ನೆ ಗುರು ತೇಗ್ ಬಹದ್ದೂರ್ ಕೊಲ್ಲಲು ಮೊಘಲ್ ದೊರೆ ಔರಂಗಜೇಬ್ ಆದೇಶ ನೀಡಿದ್ದ ಕಾರಣದಿಂದ ಕೆಂಪುಕೋಟೆಯನ್ನು ವೇದಿಕೆಯನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಶಾಂತಿ ಮೂಡಿಸುವ ಬಗ್ಗೆ ಭಾಷಣ ಮಾಡಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಎರಡನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಈ ರೀತಿ ಕೆಂಪುಕೋಟೆಯಿಂದ ಭಾಷಣ ಮಾಡುತ್ತಿದ್ದಾರೆ.
2018ರಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಂದ ಅಜಾದ್ ಹಿಂದ್ ಸರ್ಕಾರ ರಚನೆಯ 75ನೇ ವರ್ಷಾಚರಣೆ ಅಂಗವಾಗಿ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜವನ್ನು ಮೋದಿ ಹಾರಿಸಿದ್ದರಲ್ಲದೇ ರಾತ್ರಿ 9 ಗಂಟೆಯಲ್ಲಿ ಭಾಷಣ ಮಾಡಿದ್ದರು.
ಗುರುವಾರ ರಾತ್ರಿ 400 ಸಿಖ್ ಸಂಗೀತಗಾರಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪ್ರಧಾನಿ ಮೋದಿ ಅವರು ಅಂಚೆ ಸ್ಟಾಂಪ್ ಮತ್ತು ಸ್ಮರಣಾರ್ಥ ನಾಣ್ಯಗಳನ್ನು ಬಿಡುಗಡೆ ಮಾಡಲಿದ್ದಾರೆ.

