ಮೈಸೂರು: ಚಿತ್ರದುರ್ಗದ ಮುರುಘಾ ರಾಜೇಂದ್ರ ಶರಣರ ವಿರುದ್ಧ ಮೊತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿದೆ.
ಶ್ರೀಮಠದಲ್ಲಿ ಅಡುಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಮೈಸೂರಿನ ಒಡೆನಾಡಿ ಸಂಸ್ಥೆಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ.
ತನ್ನ ಇಬ್ಬರು ಹೆಣ್ಣು ಮಕ್ಕಳು ಋತುಮತಿಯರಾಗುವ ಮೊದಲೇ ಶರಣರು ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ದೂರು ನೀಡಿದ್ದಾರೆ.
ಇನ್ನೂ ಹಲವರ ಮೇಲೆ ದೌರ್ಜನ್ಯ ನಡೆದಿದೆ, ಅವರಲ್ಲಿ ಇಬ್ಬರು ಚಿಕ್ಕಮಕ್ಕಳು ನನ್ನ ಬಳಿ ವಿವರವಾಗಿ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅದನ್ನು ಆಧರಿಸಿ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಾರಿ ಇನ್ನೂ ಇಬ್ಬರು ಸಿಬ್ಬಂದಿಗಳ ಹೆಸರು ದೂರಿನಲ್ಲಿ ಸೇರ್ಪಡೆಯಾಗಿದ್ದು ಇದುವರೆಗೆ ಒಟ್ಟು ಏಳು ಮಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರು, ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ, ಮಠದ ಮರಿಸ್ವಾಮಿ ಬಸವಾದಿತ್ಯ, ಮುಖಂಡರಾದ ಪರಮಶಿವಯ್ಯ, ವಕೀಲ ಗಂಗಾಧರಯ್ಯಾ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
ಈಗ ಹೆಚ್ಚುವರಿಯಾಗಿ ಶರಣರ ಆಪ್ತ ಸಹಾಯಕ ಮಹಾಲಿಂಗ, ಅಡುಗೆ ಕೆಲಸಗಾರ ಕರಿಬಸವಪ್ಪ ಅವರ ಹೆಸರನ್ನು ಹೆಸರಿಸಲಾಗಿದೆ.
ಅಕ್ಟೋಬರ್ 13ರಂದು ಪ್ರಕರಣ ದಾಖಲಾಗಿದ್ದು, ಮಹಿಳೆ ನೀಡಿದ ದೂರು ಮತ್ತು ಅದರ ಜೊತೆಗೆ ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ಮಕ್ಕಳ ರಕ್ಷಣಾ ಘಟಕ ಮೈಸೂರು ಅಧಿಕಾರಿ ಹಾಜರು ಪಡಿಸಿದ ಬಾಲಕಿಯರು ಮತ್ತು ಆಪ್ತ ಸಮಾಲೋಚಕಿ ವರದಿ ಆಧರಿಸಿ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ದೂರು ನೀಡಿದ ಮಹಿಳೆಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. 10 ವರ್ಷಗಳ ಹಿಂದೆ ಕೌಟುಂಬಿಕ ವಿವಾದದಿಂದಾಗಿ ಪತಿ ಮಹಿಳೆಯನ್ನು ತೊರೆದು ಹೋಗಿದ್ದಾರೆ.
ತವರು ಮನೆಯ ಕಡೆಯೂ ಆರ್ಥಿಕವಾಗಿ ಹಿಂದುಳಿದಿದ್ದರಿಂದ ಅನಿವಾರ್ಯವಾಗಿ ದುಡಿಮೆಗೆ ಹೋಗಬೇಕಾಯಿತು ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ.
ಏಳು ವರ್ಷಗಳಿಂದ ಮಠದಲ್ಲಿ ಅಡುಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದೇನೆ. ಮಕ್ಕಳನ್ನು ಸಾಕಲು ತೊಂದರೆಯಾಗಿದ್ದರಿಂದ ಎಸ್ಜೆಎಂ ಕನ್ನಡ ಮಾಧ್ಯಮ ಶಾಲೆಗೆ 2016ರಲ್ಲಿ ಮೊದಲ ಮಗಳನ್ನು 3ನೆ ತರಗತಿಗೆ, ಚಿಕ್ಕಮಗಳನ್ನು ಒಂದನೇ ತರಗತಿಗೆ ದಾಖಲು ಮಾಡಿದ್ದೇನೆ.
ಮಠದ ಆಶ್ರಯದಲ್ಲಿ ನಡೆಯುತ್ತಿರುವ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಮಕ್ಕಳನ್ನು ಇರಿಸಲಾಗಿತ್ತು.
ಮಠದಲ್ಲೇ ನಾನು ಅಡುಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದರಿಂದ ನನಗೆ ಉಳಿದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಊಟದ ಸಮಯದಲ್ಲಿ ಅಥವಾ ಕೆಲಸದ ನಿಮಿತ್ತ ಹಾಸ್ಟೇಲ್ ಕಡೆ ಹೋದಾಗ ನಾನು ಮಕ್ಕಳನ್ನು ಭೇಟಿ ಮಾಡುತ್ತಿದ್ದೆ.
2019ರಲ್ಲಿ ಮೊದಲ ಮಗಳು ಏಳು, ಎರಡನೇ ಮಗಳು ಐದನೇ ತರಗತಿ ಓದುತ್ತಿದ್ದರು.
2020ರಲ್ಲಿ ಕೋವಿಡ್ನಿಂದಾಗಿ ರಜೆ ನೀಡಲಾಗಿತ್ತು. ಆಗ ಶರಣರು ವಾರ್ಡನ್ ರಶ್ಮಿ ಮುಖಾಂತರ ಮಕ್ಕಳನ್ನು ಖಾಸಗಿ ಕೋಣೆಗೆ ಕರೆಸಿಕೊಂಡು ಪ್ರಥಮವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಕ್ಕಳು ನನಗೆ ತಿಳಿಸಿದರು.
ಅಂದಿನಿಂದ ಋತುಮತಿಯಾಗುವವರೆಗೂ ಸತತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ದೊಡ್ಡವಳು ಏಳನೇ ತರಗತಿ ಮುಗಿಸುವವರೆಗೂ, ಚಿಕ್ಕವಳು ಆರನೇ ತರಗತಿ ಓದುವವರೆಗೂ ದೌರ್ಜನ್ಯ ಮುಂದುವರೆದಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ ಸದರಿ ವಸತಿ ನಿಲಯದಲ್ಲಿರುವ 15ನೇ ವರ್ಷದ 10ನೇ ತರಗತಿಯ, 14 ವರ್ಷದ 9ನೇ ತರಗತಿಯ ಕೆಲ ಮಕ್ಕಳ ಮೇಲೆ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಸಂತ್ರಸ್ಥ ಮಕ್ಕಳು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಮಹಿಳೆ ವಿವರಿಸಿದ್ದಾರೆ.
ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ವಾರ್ಡನ್ ರಶ್ಮಿ ಹೆದರಿಸಿ, ಒತ್ತಡ ತಂದು ಕೋಣೆಗೆ ಕಳುಹಿಸುತ್ತಿದ್ದರು. ಮಕ್ಕಳು ಒಪ್ಪದೇ ಇದ್ದರೆ ಬಸವಾದಿತ್ಯ, ಪರಮಶಿವಯ್ಯ, ಗಂಗಾಧರಯ್ಯ ಅವರುಗಳು ಮಕ್ಕಳನ್ನು ಹೆದರಿಸಿ ಒತ್ತಾಯ ಮಾಡಿ ಕಳುಹಿಸುತ್ತಿದ್ದರು.
ಸ್ವಾಮೀಜಿಯ ಸಹಾಯಕರಾದ ಮಹಾಲಿಂಗ, ಅಡುಗೆ ಕೆಲಸ ಮಾಡುವ ಕರಿಬಸಪ್ಪ ಇವರು ಸ್ವಾಮಿಜಿ ಖಾಸಗಿ ಕೊಠಡಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಬಿಡುತ್ತಿದ್ದರು ನಂತರ ಬಾಗಿಲಲ್ಲೇ ನಿಂತು ಬೇರೆ ಯಾರು ಹೋಗದಂತೆ ಕಾಯುತ್ತಿದ್ದರು.
ಮಕ್ಕಳು ಕೊಠಡಿಗೆ ಹೋಗಲು ಹಿಂಜರಿದಾಗ ಹೆದರಿಸುವುದನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ.
ಮುರುಘಾ ಸ್ವಾಮೀಜಿ ರಾಜ್ಯದಲ್ಲಿ ಪ್ರಖ್ಯಾತರಾಗಿದ್ದು, ಆರ್ಥಿಕ ಸಾಮಾಜಿಕ, ರಾಜಕೀಯವಾಗಿ ಪ್ರಬಲರು.
ನನ್ನ ಮಕ್ಕಳು ಹದಿಹರೆಯದವರಾಗಿದ್ದು ಅವರ ಭವಿಷ್ಯದ ದೃಷ್ಟಿಯಿಂದ ಹಾಗೂ ನಾನು ಕೂಡ ಮಠದಲ್ಲಿ ಕೆಲಸ ಮಾಡುತ್ತಿದ್ದರಿಂದ ಭಯದಿಂದಾಗಿ ಇದುವರೆಗೂ ಎಲ್ಲಿಯೂ ದೂರು ನೀಡಿರಲಿಲ್ಲ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.

