ಚೇಸ್ ಮಾಡಿ ಸ್ಯಾಂಟ್ರೋ ರವಿ ಅರೆಸ್ಟ್

ಮೈಸೂರು: ಸಿನಿಮೀಯ ರೀತಿಯಲ್ಲಿ ಕೆ.ಎಸ್.ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋರವಿ(51) ಯನ್ನು ಗುಜರಾತ್ ನಲ್ಲಿ ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಗುಜರಾತ್ ನ ಅಹಮದಾಬಾದ್ ನಲ್ಲಿ ಮಂಜುನಾಥ್ ಕೆ. ಎಸ್ ಅ. ಸ್ಯಾಂಟ್ರೋರವಿ (51),ರಾಮ್ ಜೀ (45),ಸತೀಶ್ ಕುಮಾರ್ (35) ಹಾಗೂ ಮಧುಸೂದನ್ ಅಲಿಯಾಸ್ ಮಧು ಎಂಬವರನ್ನು ಬಂಧಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ

ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು.

ಸ್ಯಾಂಟ್ರೋ ರವಿ ಬಂಧನ ಆಗಿದೆ.  ನಮ್ಮ ತಂಡಗಳು ಹಾಗೂ ಹೊರ ರಾಜ್ಯಗಳ ತಂಡಗಳು ಆತನನ್ನು ಹಿಡಿಯಲು

ಕೇರಳ, ತೆಲಂಗಾಣ, ಮಹಾರಾಷ್ಟ್ರಕ್ಕೆ ಹೋಗಿದ್ದೆವು. ಗುಜರಾತ್ ಪೊಲೀಸರ ಸಹಕಾರದಿಂದ ಮಂಜುನಾಥ್ ನನ್ನು ಬಂಧಿಸಲಾಗಿದೆ ಎಂದು ಹೇಳಿದರು.

ನಾಲ್ಕು ದಿನದಿಂದ ಮಂಡ್ಯ ಎಸ್ಪಿ ಯತೀಶ್, ರಾಮನಗರ ಎಸ್ಪಿ ಸಂತೋಷ್ ಬಾಬು, ರಾಯಚೂರು ಎಸ್ಪಿ ನಿಖಿಲ್ ನಮ್ಮೊಂದಿಗೆ ಇದ್ದು ಆರೋಪಿಗಳ ಬಂಧನಕ್ಕೆ ಸಹಕರಿಸಿದ್ದಾರೆ.

ಇನ್ಸ್‌ಪೆಕ್ಟರ್‌ಗಳಾದ ಅಝರುದ್ದೀನ್, ದಿವಾಕರ್  ಸುಮಾರು 1500 ಕಿ.ಮೀ.    ಚೇಸ್ ಮಾಡಿ ಸ್ಯಾಂಟ್ರೋ ರವಿಯನ್ನು ಹಿಡಿದಿದ್ದಾರೆ ಎಂದು ಹೇಳಿದರು.

ಸಿಸಿಬಿ ಎಸಿಪಿ ಅಶ್ವತ್ಥ ನಾರಾಯಣ ಅವರು ಉಡುಪಿಗೆ ಹೋಗಿದ್ದಾರೆ ಅವರೂ ನಮ್ಮೊಂದಿಗೆ ಇದ್ದಾರೆ ಎಂದರು.

ಸ್ಯಾಂಟ್ರೋ ರವಿ ಕ್ರಿಮಿನಲ್ ಮೈಂಡ್ ಹೊಂದಿದ್ದಾನೆ.ಅಹ್ಮದಬಾದ್‌ನಲ್ಲಿ ನಾಲ್ಕು ಆರೋಪಿಗಳನ್ನು ಬಂಧಿಸಿ,

ಅಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಅಲೋಕ್ ಕುಮಾರ್ ಸ್ಪಷ್ಟ ಪಡಿಸಿದರು.

ಕ್ರಾನಿಕ್ ವಾರೆಂಟ್ ಪಡೆದುಕೊಂಡು ಮೈಸೂರಿಗೆ ಈ ನಾಲ್ಕು ಆರೋಪಿಗಳನ್ನು ಕರೆದುಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ದೇಶದ ಹಲವು ರಾಜ್ಯಗಳಲ್ಲಿ ಸಂಚರಿಸಿರುವ ಸ್ಯಾಂಟ್ರೋ ರವಿ ಬಂಧನಕ್ಕಾಗಿ ಹಲವು ತಂಡಗಳನ್ನು ರಚಿಸಲಾಗಿತ್ತು.

ಸ್ಯಾಂಟ್ರೋರವಿ ಬಂಧಿಸುವಂತೆ ಮುಖ್ಯಮಂತ್ರಿ, ಗೃಹ ಸಚಿವರು ಕೂಡ ಒತ್ತಾಯಿಸಿದ್ಧರು ಎಂದು ತಿಳಿಸಿದರು.

ಆತ ಪ್ರತಿನಿತ್ಯ ಜಾಗ ಬದಲಾಯಿಸುವುದರ ಜೊತೆಗೆ, ಕಾರು, ಸಿಮ್ ಕಾರ್ಡ್ ಬದಲಾಯಿಸುತ್ತಿದ್ದುದರಿಂದ ಆತನನ್ನು ಬಂಧಿಸಲು ಇಷ್ಟು ದಿನಗಳಾಯಿತು‌ ಎಂದು ಅಲೋಕ್ ಕುಮಾರ್ ವಿವರ ನೀಡಿದರು.

ಸ್ಯಾಂಟ್ರೋರವಿ ಬಂಧಿಸಿರುವುದಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಲಾಗಿದೆ.