ಹುಬ್ಬಳ್ಳಿ: ಎಂಇಎಸ್ ಪುಂಡಾಟಿಕೆ ಹೊಸದೇನಲ್ಲ, ಅವರ ಒಟ್ಟು ಚಟುವಟಿಕೆಗಳೇ ಕಪ್ಪಾಗಿದ್ದು ಜನರ ಭಾವನೆಗಳನ್ನು ಕೆರಳಿಸುವ ಕಾರ್ಯವನ್ನು ಮಾಡುತ್ತಾ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದರು.
ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಎಂಇಎಸ್ ಕಳೆದ 20 ವರ್ಷಗಳ ಹಿಂದೆಯೇ ನೆಲೆ ಕಳೆದುಕೊಂಡಿದೆ, ಕಿಡಿಗೇಡಿ ಕೃತ್ಯಗಳ ಮೂಲಕ ಜನರ ಬೆಂಬಲ ಗಳಿಸಬಹುದೆಂಬ ಹುಂಬತನದಿಂದ ಹೇಯ ಕೃತ್ಯಕ್ಕೆ ಮುಂದಾಗಿದೆ ಎಂದು ಟೀಕಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿಯ ಅಥವಾ ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿಯಾ ಎಂಬ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಸಿಎಂ ಟಾಂಗ್ ನೀಡಿದರು.
ನಮ್ಮ ಪ್ರಧಾನಿ ಹಿಂದಿನ ಪ್ರಧಾನಿಯಂತೆ ಸೂಟು- ಬೂಟು, ಎಸಿ ಕೋಣೆ ದೆಹಲಿ ವಾಸ್ತವ್ಯದ ಪ್ರಧಾನ ಮಂತ್ರಿಯಲ್ಲ ಹಳ್ಳಿ ಹಳ್ಳಿಗಳಿಗೂ ಹೋಗುತ್ತಿರುವ ಪ್ರಧಾನಿ.ಮೋದೀಜಿ ಜನರ ಭಾವನೆಗಳನ್ನು ಅರಿಯುವ ಕೆಲಸ ಮಾಡುತ್ತಿದ್ದು ಅದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ನವರಿಗೆ ಆಗುತ್ತಿಲ್ಲ ಎಂದು ಕುಟುಕಿದರು.
ನಮ್ಮ ಪ್ರಣಾಳಿಕೆ ಕಂಡು ಬಿಜೆಪಿ ಅವರಿಗೆ ಹೆದರಿಕೆ ಆಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಸಿಎಂ, ಇದೊಂದು ಹಾಸ್ಯಾಸ್ಪದ ವಿಷಯ ಎಂದು ನಕ್ಕರು.
ಭಜರಂಗದಳ ವಿಷಯವಾಗಿ ಪ್ರತಿಕ್ರಿಯಿಸಿದ ಬೊಮ್ಮಾಯಿ, ಕಾಂಗ್ರೆಸ್ ನವರು ಎಸ್ ಡಿಪಿಐ -ಪಿಎಫ್ಐ ಮೆಚ್ಚಿಸಲು ಏನೇನೋ ಯತ್ನಕ್ಕೆ ಮುಂದಾಗಿದ್ದಾರೆ ಅವರನ್ನು ಮೆಚ್ಚಿಸಲು ಹೋಗಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ಟೀಕಿಸಿದರು.

