ಬೆಂಗಳೂರು: ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾದ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ ಸ್ಥಾನ ಪಡೆದಿವೆ.
ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಸಕ್ತ ಸಾಲಿನ SSLC ಫಲಿತಾಂಶ ಪ್ರಕಟಿಸಿದ್ದು ಈ ಬಾರಿ ಶೇ 83.89 ರಷ್ಟು ಫಲಿತಾಂಶ ಬಂದಿದೆ.
4 ಜನ ವಿದ್ಯಾರ್ಥಿಗಳು 625 ಅಂಕಗಳಿಸಿದ್ದಾರೆ.
ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ಆರ್. ರಾಮಚಂದ್ರನ್,
ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಹಾಗೂ ಎಸ್ ಎಸ್ ಎಲ್ ಸಿ ಮಂಡಳಿ ನಿರ್ಧೇಶಕ ಗೋಪಾಲ ಕೃಷ್ಣ ಅವರು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.
2023ರ ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆಗಳು ನಡೆದಿದ್ದವು.
ಒಟ್ಟು ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ಇವರಲ್ಲಿ 7,00,619 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.
ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ ಶಾಲೆ- 86.74%, ಅನುದಾನ ಶಾಲೆ- 85.64%, ಖಾಸಗಿ – 90.89% ಫಲಿತಾಂಶ ಸಾಧಿಸಿವೆ ಎಂದು ತಿಳಿಸಿದರು.
ಗ್ರಾಮೀಣ ಮತ್ತು ಸರ್ಕಾರಿ ಶಾಲಾ ಮಕ್ಕಳು ಉತ್ತಮ ಸಾಧನೆ ಮಾಡಿದ್ದು, ಬಾಲಕರು – 3,41,108( 80.08%) ಹಾಗೂ ಬಾಲಕಿಯರು – 3,59,511( 87.98%) ಪಾಸ್ ಆಗಿದ್ದಾರೆ.
ಈ ಬಾರಿ ಮೊದಲ ಸ್ಥಾನ ಚಿತ್ರದುರ್ಗ (96.80%), ದ್ವಿತೀಯ ಸ್ಥಾನ ಮಂಡ್ಯ (96.74%), ತೃತೀಯ ಸ್ಥಾನವನ್ನು ಹಾಸನ (96.68%) ಜಿಲ್ಲೆ ಪಡೆದುಕೊಂಡಿದ್ದು,
ಕೊನೆ ಸ್ಥಾನದಲ್ಲಿ ಯಾದಗಿರಿ (75.49%) ಜಿಲ್ಲೆಯಿದೆ ಎಂದು ಹೇಳಿದರು.
ಬೆಂಗಳೂರಿನ ನ್ಯೂ ಮೆಕಾಲೆ ಇಂಗ್ಲಿಷ್ ಹೈಸ್ಕೂಲ್ ವಿದ್ಯಾರ್ಥಿನಿ ಭೂಮಿಕ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾಧರನಾಥ ಹೈಸ್ಕೂಲ್ನ ಯಶಸ್ ಗೌಡ , ಸವದತ್ತಿಯ ಕುಮಾರೇಶ್ವರ್ ಹೈಸ್ಕೂಲ್ನ ಅನುಪಮ ಶ್ರೀಶೈಲ್ ಹಿರೇಹೋಳಿ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಆಕ್ಸ್ ಫರ್ಡ್ ಇಂಗ್ಲಿಷ್ ಹೈಸ್ಕೂಲ್ನ ಭೀಮನಗೌಡ ಹನುಮಂತ ಗೌಡ ಬೀರಾದರ್ ಪಾಟೀಲ್ ಮೊದಲ ಸ್ಥಾನವನ್ನು ಪಡೆದಿದ್ದಾರೆ.
ಫೋಟೋ ಕಾಪಿ ಪಡೆಯಲು ಮೇ 14 ಕೊನೆ ದಿನವಾಗಿದ್ದು, ಮರು ಮೌಲ್ಯಮಾಪನ, ಮರು ಎಣಿಕೆಗೆ ಮೇ 21 ಕೊನೆ ದಿನವಾಗಿದೆ. ಇನ್ನೂ ಪೂರಕ ಪರೀಕ್ಷೆಗೆ ನೋಂದಣಿಗೆ ಮೇ 15 ಕೊನೆ ದಿನವಾಗಿದೆ ಎಂದು ರಾಮಚಂದ್ರನ್ ತಿಳಿಸಿದರು.

